ಲಕ್ನೋ: ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಕ್ಕೆ ಮಗಳನ್ನು ಕೋಲಿನಿಂದ ಹೊಡೆದು ತಂದೆ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ರತನ್‌ಪುರದಲ್ಲಿ ನಡೆದಿದೆ.

ಆರೋಪಿ ತಂದೆ ಪುಷ್ಪೇಂದ್ರ ಅಲಿಯಾಸ್ ಪಪ್ಪು ಶರ್ಮಾ ತನ್ನ 12 ವರ್ಷದ ಮಗಳನ್ನು ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ. ಅಂಗಡಿಯ ಮಾಲೀಕರು ಆರೋಪಿ ಪುಷ್ಪೇಂದ್ರನಿಗೆ ತಮ್ಮ ಮಗಳು ಕ್ಯಾಂಡಿ ಕದ್ದಿದ್ದಾಳೆಂದು ಹೇಳಿದ್ದರು.

ಇದರಿಂದ ಕೋಪಗೊಂಡಿದ್ದ ಪುಷ್ಪೇಂದ್ರ ಮನೆಗೆ ಬರುತ್ತಿದ್ದಂತೆ ಕೋಲಿನಿಂದ ಹೊಡೆದು ಮಗಳನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ಮಾ.27ರಂದು ಬಾಲಕಿಯ ತಾಯಿ ಆರತಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನನ್ವಯ ನರೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮಾ.29 ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.