ಆಂಧ್ರಪ್ರದೇಶ: ಆಂಧ್ರಪ್ರದೇಶದ ಎಲ್ಲೂರು ಎಂಬಲ್ಲಿ ಹೊಸದಾದ ಕಾಯಿಲೆಯೊಂದು ಕಂಡುಬಂದಿದೆ. ಈ ನಿಗೂಢ ಕಾಯಿಲೆ ಈಗಾಗಲೇ 347 ಮಂದಿಯಲ್ಲಿ ಕಾಣಿಸಿಕೊಂಡಿದ್ದು ಒಬ್ಬರು ಇದರಿಂದಾಗಿ ಸಾವನ್ನಪ್ಪಿದ್ದಾರೆ.
ಈ ರೋಗದ ಲಕ್ಷಣಗಳನ್ನು ಗುರುತಿಸಲು ಹಾಗೂ ಪರಿಹಾರವನ್ನು ಕಂಡುಹಿಡಿಯಲು ಮಂಗಳಗಿರಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.
ಕಾಯಿಲೆಗೆ ಗುರಿಯಾದವರಲ್ಲಿ ಕಾಣಿಸಿಕೊಂಡ ಗುಣಲಕ್ಷಣಗಳು ಮೂರ್ಚೆ ಹೋಗುವುದು, ವಾಕರಿ, ಡಿಸೆಂಟ್ರಿ ಹಾಗೂ ನಿಶ್ಯಕ್ತಿ. ರೋಗಿಗಳನ್ನು ರಕ್ತ ಪರೀಕ್ಷೆ, ‘ಸಿ.ಟಿ. ಸ್ಕ್ಯಾನ್’ ನಂತರವೂ ಈ ರೋಗಕ್ಕೆ ನಿಕರವಾದ ಕಾರಣ ಪತ್ತೆ ಹಚ್ಚಲು ವೈದ್ಯರಿಗೆ ಇದುವರೆಗೂ ಸಾಧ್ಯವಾಗಿಲ್ಲ.
ಭಾನುವಾರದವರೆಗೆ 292 ಮಂದಿ ಅನಾರೋಗ್ಯಕ್ಕೆ ಗುರಿಯಾಗಿದ್ದರೆ, ಸೋಮವಾರದ ಹೊತ್ತಿಗೆ ಆ ಸಂಖ್ಯೆ 347ಕ್ಕೆ ಅಂದರೆ 45 ಮಂದಿಯಲ್ಲಿ ಹರಡಿದೆ. 200 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸೊಳ್ಳೆಗಳ ನಿಯಂತ್ರಿಸಲೆಂದು ಬಳಸಲಾದ ಹೊಗೆಯಿಂದಾಗಿ ಜನರು ಕಾಯಿಲೆ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆಯಾದರೂ, ಅದು ಖಚಿತವಾಗಿಲ್ಲ. ಹಲವು ಬಗ್ಗೆಯ ಪರೀಕ್ಷೆಗಳ ನಂತರವೇ ಖಚಿತವಾದ ಕಾರಣ ತಿಳಿಯಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಈ ವಿಷಯವಾಗಿಯೇ ಆಂಧ್ರ ಮುಖ್ಯಮಂತ್ರಿ ವೈ. ಎಸ್ ಜಗನ್ಮೋಹನ ರೆಡ್ಡಿ ಎಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯದ ಕುರಿತು ವಿಚಾರಿಸಿದರು.