ಮ್ಲಾ: ಹಿಮಾಚಲ ಪ್ರದೇಶದ ಮಂಡಿ-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಭೂಕುಸಿತದಿದ್ದ, ಎರಡು ಬಸ್ಗಳ ಮೇಲೆ ಭೂ ಕುಸಿದಿದ್ದು, 46 ಮಂದಿ ಸಾವನ್ನಪ್ಪಿದ್ದು, 10ಮಂದಿ ನಾಪತ್ತೆಯಾಗಿದ್ದಾರೆ. ಭಾನುವಾರ ಮನಾಲಿಯಿಂದ ಕತ್ರಾಗೆ, ಚಂಬಲ್ದಿಂದ ಮನಾಲಿಗೆ ಬಸ್ಗಳು ತೆರಳುತ್ತಿದ್ದವು. ಉಪಹಾರ ಸೇವಿಸಲು ಹೆದ್ದಾರಿಯಲ್ಲಿನ ಹೋಟೆಲ್ಗಳ ಬಳಿ ಎರಡು ಬಸ್ಗಳನ್ನೂ ಚಾಲಕರು ನಿಲ್ಲಿಸಿದ್ದರು. ಈ ವೇಳೆ ಎರಡೂ ಬಸ್ಗಳು ನಿಂತಿದ್ದ ಜಾಗದಲ್ಲಿ ಭೂಮಿ ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಮನಾಲಿಯಿಂದ ಕತ್ರಾ ಮಾರ್ಗದಲ್ಲಿ ತೆರಳುತ್ತಿದ್ದ ಬಸ್ನಲ್ಲಿ 8 ಮಂದಿ ಹಾಗೂ ಚಂಬಲ್ದಿಂದ ಮನಾಲಿಗೆ ಹೋಗುತ್ತಿದ್ದ ಬಸ್ನಲ್ಲಿ 47 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಈ ದುರ್ಘಟನೆಯಲ್ಲಿ 46 ಮಂದಿ ಮೃತಪಟ್ಟಿದ್ದು, ಮೃತದೇಹಗಳು ಪತ್ತೆಯಾಗಿವೆ. ಇನ್ನೂ 10 ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ಅದೃಷ್ಟವಶಾತ್ 5 ಮಂದಿ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಡಿಯ ಉಪ ಆಯುಕ್ತ ಸಂದೀಪ್ ಕದಂ ತಿಳಿಸಿದ್ದಾರೆ.ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಭಾರತೀಯ ಸೇನೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಸ್ಥಳೀಯರು, ಪೊಲೀಸರ ನೆರವಿನೊಂದಿಗೆ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೆ ಇಂದು ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ.
ಘಟನಾ ಸ್ಥಳಕ್ಕೆ ಸಿಎಂ ಭೇಟಿ, ಪ್ರಧಾನಿ ಮೋದಿ ಸಂತಾಪ: ಇತ್ತ, ಈ ಭೀಕರ ಭೂಕುಸಿತ ಸಂಭವಿಸಿದ ಘಟನಾ ಸ್ಥಳಕ್ಕೆ ಹಿಮಾಚಲ ಪ್ರದೇಶದ ಸಿಎಂ ವೀರಭದ್ರ ಸಿಂಗ್ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಅವರು ಈ ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.ಇನ್ನು, ಭೂಕುಸಿತದಲ್ಲಿ ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಕೇಂದ್ರದಿಂದ ನೀಡಲಾಗುವುದು ಎಂದು ರಾಜ್ಯಕ್ಕೆ ಅಭಯ ನೀಡಿದ್ದಾರೆ.