ಹಲವಾರು ರಾಜ್ಯಗಳಲ್ಲಿ ವರದಿಯಾಗುತ್ತಿರುವ ಪಕ್ಷಿ ಜ್ವರ ಈಗ ಮಹಾರಾಷ್ಟ್ರದಲ್ಲೂ ದೃಢ ಪಟ್ಟಿದೆ. ಇದು ಭಾರಿ ಆತಂಕ ಸೃಷ್ಟಿಸಿದ್ದು, ಕೋಳಿ ಉದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಕಂಡುಬಂದಿದ್ದು, ಹರಿಯಾಣ ಪಂಚಕುಲದ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಅಸಹಜ ಸಾವಿನಿಂದಾಗಿ ತೀವ್ರ ಎಚ್ಚರಿಕೆ ವಹಿಸಿದೆ. ಪಿಐಬಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಹರಿಯಾಣದಲ್ಲಿ ಕಳೆದ 25 ದಿನಗಳಲ್ಲಿ ಪಂಚಕುಲಾದ ಬಾರ್ವಾಲಾದಲ್ಲಿ ಒಟ್ಟು 4,30,267 ಪಕ್ಷಿಗಳು ಸಾವನ್ನಪ್ಪಿವೆ.
ಸತ್ತ ಕಾಗೆಗಳು ಮುಂಬೈನಲ್ಲಿ ಭಯವನ್ನು ಹುಟ್ಟುಹಾಕಿದರೆ, ಪರಭಾನಿಯಲ್ಲಿ ಪಕ್ಷಿ ಜ್ವರ ದೃಢವಾಗಿದೆ. ಲಾತೂರ್ ಮತ್ತು ಅಮರಾವತಿಯಲ್ಲಿ ಪಕ್ಷಿಗಳು ಸತ್ತಿದ್ದು ವರದಿಯಾಗಿದೆ.
ಬರ್ಡ್ ಫ್ಲೂ ಎಂದರೇನು?
ಬರ್ಡ್ ಫ್ಲೂ ಅಥವಾ ಏವಿಯನ್ ಇನ್ಫ್ಲುಯೆನ್ಸ ವೈರಸ್ ಸೋಂಕಿನ ಇನ್ಫ್ಲುಯೆನ್ಸವಾಗಿದ್ದು, ಇದು ಹೆಚ್ಚಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ. ಈ ರೋಗವು ಇನ್ಫ್ಲುಯೆನ್ಸ ಟೈಪ್-ಎ ವೈರಸ್ ನಿಂದ ಉಂಟಾಗುತ್ತದೆ. ಪ್ರಸ್ತುತ H5N1 ಮತ್ತು H8N1 ವೈರಸ್ ತಳಿಗಳು ಪಕ್ಷಿಗಳ ಸಾವಿಗೆ ಕಾರಣವಾಗಿವೆ ಎಂಬುದಕ್ಕೆ ಪುರಾವೆಗಳಿವೆ.
ವೈರಸ್ ಮೊದಲ ಬಾರಿಗೆ ಚೀನಾದಲ್ಲಿ 1996 ರಲ್ಲಿ ವರದಿಯಾಗಿದ್ದು, ಅಂದಿನಿಂದ ಹಲವಾರು ಪ್ರಕರಣಗಳು ವಿಶ್ವದಾದ್ಯಂತ ವರದಿಯಾಗಿದೆ. ಭಾರತದಲ್ಲಿ ಮೊದಲ ಪ್ರಕರಣ 2006 ರಲ್ಲಿ ಮಹಾರಾಷ್ಟ್ರದ ನಂದುರ್ಬಾರ್ನಲ್ಲಿ ವರದಿಯಾಗಿತ್ತು.
ಸೋಂಕು ಹೇಗೆ ಹರಡುತ್ತದೆ?
ಕಾಡು ಜಲವಾಸಿ ಪಕ್ಷಿಗಳು ಬಾತುಕೋಳಿಗಳು ಮತ್ತು ಹೆಬ್ಬಾತುಗಳು ಪ್ರಾಥಮಿಕ ಮೂಲವಾಗಿದೆ. ದೂರದ ಪ್ರಯಾಣ ಮಾಡಿದ ಪಕ್ಷಿಗಳು ಸುತ್ತಲೂ ವೈರಸ್ ಹರಡುತ್ತವೆ.
ಇದು ಮಾನವರಿಗೆ ಹರಡಬಹುದೇ?
ಹೌದು, ಎಚ್ 5 ಎನ್ 1 ವೈರಸ್ ಜಾತಿಯ ಸೋಂಕಿತ ಹಕ್ಕಿಯಿಂದ ಮನುಷ್ಯರಿಗೆ ಸೋಂಕು ತರುತ್ತದೆ. ಮಾನವರಲ್ಲಿ ಊ5ಓ1 ಸೋಂಕಿನ ಮೊದಲ ಪ್ರಕರಣ 1997 ರಲ್ಲಿ ಹಾಂಗ್ ಕಾಂಗ್ನಲ್ಲಿ ವರದಿಯಾಗಿದೆ. ಕೋಳಿ ಕೃಷಿ ಕೆಲಸಗಾರನು ಸೋಂಕಿತ ಪಕ್ಷಿಗಳಿಂದ ಸ್ಪರ್ಶಕ್ಕೆ ಒಳಗಾದಾಗ ಸೋಂಕು ಕಂಡುಬಂದಿತ್ತು. ಆದರೆ ಭಾರತದಲ್ಲಿ ಮಾನವರಲ್ಲಿ ಇದುವರೆಗೂ ಪಕ್ಷಿ ಜ್ವರ ಪ್ರಕರಣಗಳು ವರದಿಯಾಗಿಲ್ಲ. ಸೋಂಕಿತ ಪಕ್ಷಿಗಳ ಸಮೀಪಕ್ಕೆ ಹೋಗುವ ಜನರು ಸೋಂಕಿನ ಹರಡುವಿಕೆಗೆ ಹೆಚ್ಚು ಗುರಿಯಾಗುತ್ತಾರೆ.
ರೋಗ ಎಷ್ಟು ಗಂಭೀರವಾಗಿದೆ?
ಬರ್ಡ್ ಫ್ಲೂ ಸುಮಾರು 60 ಪ್ರತಿಶತದಷ್ಟು ಮರಣ ಪ್ರಮಾಣವನ್ನು ಹೊಂದಿದೆ. 2006 ಮತ್ತು 2018 ರ ನಡುವೆ ಭಾರತವು ಒಟ್ಟು 225 ಪಕ್ಷಿ ಜ್ವರ ಸೋಂಕಿನ ಕೇಂದ್ರವನ್ನು ವರದಿ ಮಾಡಿದೆ.
ಭಾರತದಲ್ಲಿ ಪಕ್ಷಿ ಜ್ವರ ಪ್ರಸ್ತುತ ಸ್ಥಿತಿ ಏನು?
ಭಾನುವಾರ, ಉತ್ತರ ಪ್ರದೇಶದ ಕಾನ್ಪುರ್ ಮೃಗಾಲಯವನ್ನು ಮುಚ್ಚಲಾಗಿದೆ. ಜೊತೆಗೆ ಮೃಗಾಲಯದಲ್ಲಿ ಶವವಾಗಿ ಪತ್ತೆಯಾದ ಕಾಡು ಕೋಳಿಗಳಲ್ಲಿ ಪಕ್ಷಿ ಜ್ವರ ದೃಢ ಪಟ್ಟ ನಂತರ ಅಲ್ಲಿನ ಎಲ್ಲಾ ಪಕ್ಷಿಗಳನ್ನು ಕೊಲ್ಲಲಾಗುವುದು ಎಂದು ಘೋಷಿಸಲಾಗಿತ್ತು.
ನವದೆಹಲಿಯ ಸಂಜಯ್ ಸರೋವರದಲ್ಲಿ ಭಾನುವಾರ 17 ಬಾತುಕೋಳಿಗಳು ಶವವಾಗಿ ಪತ್ತೆಯಾಗಿದ್ದು, ಅಧಿಕಾರಿಗಳು ಇದನ್ನು “ಎಚ್ಚರಿಕೆ ವಲಯ” ಎಂದು ಘೋಷಿಸಿದ್ದಾರೆ. ಸತ್ತ ಬಾತುಕೋಳಿಗಳ ಮಾದರಿಗಳನ್ನು ಪಕ್ಷಿ ಜ್ವರ ಸಾವಿಗೆ ಕಾರಣವೇ ಎಂದು ಪರೀಕ್ಷಿಸಲು ಕಳುಹಿಸಲಾಗಿದೆ.
ದಕ್ಷಿಣ ದೆಹಲಿಯ ಜನಪ್ರಿಯ ಹೌಜ್ ಖಾಸ್ ಉದ್ಯಾನವನವನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಇದು ಬೃಹತ್ ಜಲಮೂಲವಾಗಿದೆ ಮತ್ತು ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿತ್ತು.
ಮಧ್ಯಪ್ರದೇಶದ 13 ಜಿಲ್ಲೆಗಳಲ್ಲಿ ಈವರೆಗೆ ಜ್ವರ ಪ್ರಕರಣಗಳು ದೃಢ ಪಟ್ಟಿದ್ದು, ಕಳೆದ ತಿಂಗಳು ರಾಜ್ಯದಲ್ಲಿ ಈ ವೈರಸ್ ಮೊದಲ ಬಾರಿಗೆ ಪತ್ತೆಯಾದಾಗಿನಿಂದ 27 ಜಿಲ್ಲೆಗಳಲ್ಲಿ ಸುಮಾರು 1,100 ಕಾಗೆಗಳು ಮತ್ತು ಇತರ ಕಾಡು ಪಕ್ಷಿಗಳು ಮೃತಪಟ್ಟಿವೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಂಗ್ ಅಣೆಕಟ್ಟು ವನ್ಯಜೀವಿ ಅಭಯಾರಣ್ಯದಲ್ಲಿ ಭಾನುವಾರ 215 ವಲಸೆ ಹಕ್ಕಿಗಳ ಶವಗಳು ಪತ್ತೆಯಾಗಿದ್ದು, ಏವಿಯನ್ ಇನ್ಫ್ಲುಯೆನ್ಸದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಡಿಸೆಂಬರ್ 29 ರಿಂದ ನೂರಾರು ವಲಸೆ ಹಕ್ಕಿಗಳು ಸರೋವರ ಪ್ರದೇಶದಲ್ಲಿ ಸತ್ತಿವೆ.
ತಜ್ಞರ ಪ್ರಕಾರ, ಆಗ್ನೇಯ ಏಷ್ಯಾದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎಚ್ 5 ಎನ್ 1 ವೈರಸ್ ಸೋಂಕಿನ ಸಾಧ್ಯತೆಗಳು ಕಡಿಮೆ ಇವೆ.
70 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡರೆ ವೈರಸ್ ತಕ್ಷಣ ಸಾಯುತ್ತದೆ ಎಂದು ಬಾಂಬೆ ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ.ಎ.ಎಸ್ ಹೇಳಿದ್ದಾರೆ. “ಆಗ್ನೇಯ ಏಷ್ಯಾದ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನಲಾಗುತ್ತದೆ ಆದ್ದರಿಂದ ಮಾನವರು ಕೋಳಿ ಮತ್ತು ಮೊಟ್ಟೆಗಳನ್ನು ತಿನ್ನುವುದರಿಂದ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಬಹಳ ವಿರಳ ”ಎಂದು ಡಾ ರಾನಡೆ ಹೇಳಿದರು.