ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಇಂದು ನಡೆಯಬೇಕಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮ ನಂತರ ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನೂ ರದ್ದು ಮಾಡಲಾಗಿದೆ. ಸಿಎಂ ನಿತೀಶ್ ಜ್ವರದಿಂದ ಬಳಲುತ್ತಿರುವ ಕಾರಣದಿಂದಾಗಿ ಇಂದು ನಡೆಯಬೇಕಿದ್ದ ‘ಲೋಕ ಸಂವಾದ್’ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಕಚೇರಿ ಪ್ರಕಟಣೆ ಹೊರಡಿಸಿದೆ. ಈ ‘ಲೋಕ ಸಂವಾದ್’ ಕಾರ್ಯಕ್ರಮದಲ್ಲಿ ಪ್ರತಿ ಸೋಮವಾರ ನಿತೀಶ್ ನೇರವಾಗಿ ಜನತೆಯನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಸಿಎಂ ನಿತೀಶ್ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿ ರದ್ದುಗೊಳ್ಳಲು ಬೇರೆಯದ್ದೆ ಕಾರಣ ಇವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಆರ್ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಕುಟುಂಬದ ಮೇಲೆ ನಡೆಯುತ್ತಿರುವ ಸಿಬಿಐ, ಐಟಿ ಹಾಗೂ ಇಡಿ ಅಧಿಕಾರಿಗಳ ದಾಳಿಯಿಂದ ಬಿಹಾರದ ಸಮ್ಮಿಶ್ರ ಸರ್ಕಾರ ಮುಜುಗರ ಎದುರಿಸುತ್ತಿದೆ. ಲಾಲೂ ಪ್ರಸಾದ್ ಯಾದವ್ ಕುಟುಂಬಸ್ಥರ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು ಹಾಗೂ ಲಾಲೂ ಕುಟುಂಬದ ಮೇಲೆ ವಿವಿಧ ಇಲಾಖೆಗಳ ದಾಳಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಸಿಎಂ ನಿತೀಶ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಕೆಲ ದಿನಗಳಿಂದ ಲಾಲೂ ಪ್ರಸಾದ್ ಯಾದವ್ ಮತ್ತವರ ಪತ್ನಿ ರಾಬ್ಡಿ ದೇವಿ, ಮಗ, ಬಿಹಾರದ ಡಿಸಿಎಂ ತೇಜಸ್ವಿ ಯಾದವ್ ಹಾಗೂ ಪುತ್ರಿ, ರಾಜ್ಯಸಭಾ ಸದಸ್ಯೆ ಮಿಸಾ ಭಾರ್ತಿ ಮೇಲೆ ಸಿಬಿಐ, ಐಟಿ ಹಾಗೂ ಇಡಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ.