ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಲುಕಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಇನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿಯೇ ಇರಲಿದ್ದಾರೆ.
ದೆಹಲಿ ಕೋರ್ಟ್ ನ ವಿಶೇಷ ನ್ಯಾಯಾಧೀಶರಾಗಿರುವ ಸುನಿಲ್ ರಾಣಾ ಅವರ ಮುಂದೆ ಕಾರ್ತಿಯನ್ನು ಸಿಬಿಐ ಹಾಜರುಪಡಿಸಿತು. ಕಾರ್ತಿ ಕಳೆದ ನಾಲ್ಕು ದಿನಗಳಿಂದ ಯಾವುದೇ ರೀತಿಯಿಂದಲೂ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಆತನ ಮೊಬೈಲ್ ನ ಪಾಸ್ ವರ್ಡ್ ಗಳನ್ನು ನೀಡುತ್ತಿಲ್ಲ ಮತ್ತು ನಾನು ರಾಜಕೀಯಕ್ಕೆ ಬಲಿಯಾಗಿದ್ದೇನೆ ಎಂದಷ್ಟೇ ಹೇಳುತ್ತಿದ್ದಾನೆ ಎಂದು ಸಿಬಿಐ ನ್ಯಾಯಾಧೀಶರಿಗೆ ತಿಳಿಸಿತು.
ಮುಂಬಯಿಯ ಬೈಕಲಾ ಜೈಲಿಗೆ ಕಾರ್ತಿಯನ್ನು ಕರೆದುಕೊಂಡು ಹೋಗಿ ಐಎನ್ ಎಕ್ಸ್ ನ ಆಗಿನ ಪ್ರಮೋಟರ್ ಇಂದ್ರಾಣಿ ಮುಖರ್ಜಿ ಮುಂದೆ ಕುಳ್ಳಿರಿಸಲಾಗಿತ್ತು. ಇಂದ್ರಾಣಿ ಒಂದು ಸಾಕ್ಷ್ಯವಾಗಲಿದ್ದಾರೆ ಎಂದು ಸಿಬಿಐ ಪರವಾಗಿ ವಾದಿಸಿದ ಎಎಸ್ ಜಿ ತುಷಾರ್ ಮೆಹ್ತಾ ತಿಳಿಸಿದರು.
ಭಾನುವಾರ ಹಗರಣದ ಬಗ್ಗೆ ಕೆಲವು ಮಾಹಿತಿ ಬಹಿರಂಗವಾಗಿದೆ. ಇದನ್ನು ತನಿಖೆ ದೃಷ್ಟಿಯಿಂದ ಬಹಿರಂಗಪಡಿಸಲಾಗದು. ಆದರೆ ಇನ್ನಷ್ಟು ಸತ್ಯಗಳು ಹೊರಬರಲು ಕಸ್ಟಡಿ ಅಗತ್ಯವಾಗಿದೆ ಎಂದು ಮಹ್ತಾ ವಾದಿಸಿದರು ಮತ್ತು ಕಾರ್ತಿಗೆ ಜಾಮೀನು ನೀಡಬಾರದು ಎಂದರು.