ಹೊಸದಿಲ್ಲಿ: ಬಿಹಾರದಲ್ಲಿರುವ ನಕಾರಾತ್ಮಕ ಬೆಳವಣಿಗೆಯನ್ನು ತೊಡೆದು ಹಾಕಲು ಜನತೆ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ.
ಈ ಹಿಂದೆ ಜಾತಿ ಮತ್ತು ಸಮಾಜಕ್ಕಾಗಿ ಮತ ಹಾಕುತ್ತಿದ್ದ ಜನತೆಗೆ ಇದೀಗ ಅರಿವಾಗಿದ್ದು, ಇಲ್ಲಿನ ಯುವ ಜನರು ಇದೀಗ ರಾಜ್ಯದ ಅಭಿವೃದ್ಧಿಗಾಗಿ ಎನ್ ಡಿಎ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿತ್ತಿದ್ದಾರೆ. ಮಹಾಮೈತ್ರಿ ಕೂಡದಲ್ಲಿ ಕಾಂಗ್ರೆಸ್ ಪಕ್ಷವೊಂದೇ ರಾಷ್ಟ್ರೀಯ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಇದೀಗ ಅಳಿವಿನಂಚಿನಲ್ಲಿದೆ. ಬಿಹಾರದಲ್ಲಿ ಬಿಜೆಪಿ ಪಕ್ಷ ಗೆಲವು ಸಾಧಿಸಿದ್ದೇ ಆದರೆ ಅದಕ್ಕೆ ಪ್ರಮುಖ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಪ್ರಿಯತೆ ಎಂದು ಹೇಳಿದ್ದಾರೆ.
ಪ್ರಶಸ್ತಿ ಮರಳಿಸುವವರು ಬೇರೆಯೇ ಮಾರ್ಗದ ಮೂಲಕ ರಾಜಕಾರಣ ನಡೆಸುತ್ತಿದ್ದಾರೆ ಮತ್ತು ಅವರು ಬಿಜೆಪಿ ವಿರೋಧಿ ಹುಚ್ಚು ಶಕ್ತಿಗಳಾಗಿದ್ದಾರೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರೂ ಆಗಿರುವ ಜೇತ್ಲಿ ಅವರು, ಲೇಖಕರು, ಇತಿಹಾಸಜ್ಞರು, ಸಾಹಿತಿಗಳು, ಚಿತ್ರ ನಿರ್ಮಾಪಕರು ಮುಂತಾಗಿ ಹಲವು ರಂಗಗಳ ಸೃಜನಾತ್ಮಕ ವ್ಯಕ್ತಿಗಳು ದೇಶದಲ್ಲಿ ಈಚಗೆ ಭುಗಿಲೆದ್ದಿರುವ ಧಾರ್ಮಿಕ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾಗುತ್ತಿರುವ ಹಲ್ಲೆಯನ್ನು ವಿರೋಧಿಸಿ ಪ್ರಶಸ್ತಿ ಮರಳಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.