ಚೆನ್ನೈ: ಬಾಲಕೋಟ್ ನಲ್ಲಿ ಕೆಲವು ತಿಂಗಳುಗಳ ಹಿಂದೆ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿದ್ದರೂ ಮತ್ತೆ ಅವುಗಳು ತಲೆ ಎತ್ತಿವೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.
ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಸೇನೆಯ ವಾಹನದ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ದಾಳಿ ಮಾಡಿ ಬಾಲಕೋಟ್ ನಲ್ಲಿದ್ದ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿತ್ತು.
ಜೈಶ್ ಎ ಮೊಹಮ್ಮದ್ ನ ಬಾಲಕೋಟ್ ನಲ್ಲಿರುವ ಶಿಬಿರವು ಮತ್ತೆ ಸಕ್ರಿಯವಾಗಿದೆ ಎಂದು ರಾವತ್ ಅವರು ಮಾಹಿತಿ ನೀಡಿದರು.
ಚೆನ್ನೈಯಲ್ಲಿ ಯುವ ನಾಯಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾವತ್ ಅವರು, ನಾವು ಹಿಂದೆ ಮಾಡಿದ ರೀತಿಯಲ್ಲೇ ಮತ್ತೆ ದಾಳಿ ಮಾಡುವುದಿಲ್ಲ. ಶತ್ರು ಸೇನೆಯು ಇದರ ಬಗ್ಗೆ ಊಹೆ ಮಾಡುತ್ತಲೇ ಇರಬೇಕು ಎಂದು ಅವರು ತಿಳಿಸಿದರು.