ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣ ನಂತರ ಜಯಲಲಿತಾರನ್ನೇ ಹೋಲುವ ಯುವತಿಯೊಬ್ಬಳ ಚಿತ್ರ ಎಲ್ಲೆಡೆ ಪ್ರಚಾರವಾಗಿ ಆಕೆ ಜಯಾ ಅವರ ಮಗಳು ಎಂಬ ಸುದ್ದಿ ಹಬ್ಬಿತ್ತು. ಆದರೆ ಆಕೆ ಜಯಾ ಮಗಳಲ್ಲ, ಇದು ಸುಳ್ಳು ಸುದ್ದಿ ಎಂದು ಸಾಬೀತು ಆದ ನಂತರ ಇದೀಗ ಜಯಲಿಲಿತಾ ಅವರ ಮಗ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ.
ಈರೋಡ್ ನಿವಾಸಿಯಾದ ಕೃಷ್ಣ ಮೂರ್ತಿ ಎಂಬವರು ತಾನು ಜಯಲಲಿತಾ ಅವರ ಪುತ್ರ. ತನ್ನ ಅಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ. ನಾನು ಜಯಲಿಲತಾರ ಏಕೈಕ ಪುತ್ರನಾಗಿದ್ದು, ಜಯಾ ಸ್ನೇಹಿತೆ ವನಿತಾಮಣಿ ಅವರ ಮನೆಯಲ್ಲಿ ದತ್ತುಪುತ್ರನಾಗಿ ಬೆಳೆದಿದ್ದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
2016 ಸಪ್ಟೆಂಬರ್ 14ರಂದು ಪೋಯಸ್ ಗಾರ್ಡನ್ನಲ್ಲಿರುವ ಮನೆಯಲ್ಲಿ ತಾನು ಜಯಾ ಅವರನ್ನು ಭೇಟಿಯಾಗಿದ್ದೆ. ಜಯಲಲಿತಾ ಅವರೊಂದಿಗೆ ನಾನು ನಾಲ್ಕು ದಿನಗಳ ಕಾಲ ಇದ್ದೆ. ನಾನು ಆಕೆಯ ಪುತ್ರ ಎಂಬ ವಿಷಯವನ್ನು ಜಯಾ ಜನರಿಗೆ ಹೇಳಲು ಬಯಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಯಾ ಮತ್ತು ಶಶಿಕಲಾ ನಡುವೆ ವಾಗ್ವಾದ ನಡೆದಿದ್ದು ಶಶಿಕಲಾ ಅವರು ಜಯಾ ಮಹಡಿಯಿಂದ ದೂಡಿ ಕೆಳಗೆ ಬೀಳಿಸಿದ್ದರು. ಮೆಟ್ಟಿಲಿನಿಂದ ಕೆಳಗೆ ಬಿದ್ದ ಜಯಲಲಿತಾ ಅವರಿಗೆ ಗಾಯಗಳಾಗಿತ್ತು ಅಂತಾರೆ ಕೃಷ್ಣಮೂರ್ತಿ.
ಜೀವಭಯದ ಕಾರಣ ನಾನು ಇಲ್ಲಿಯವರೆಗೆ ಈ ವಿಷಯವನ್ನು ಹೇಳಲಿಲ್ಲ. ಆದರೆ ಈಗ ಧೈರ್ಯದಿಂದ ಮುಂದೆ ಬಂದಿದ್ದೇನೆ. ಜಯಲಿಲಿತಾ ಅವರ ಏಕೈಕ ಪುತ್ರ ನಾನು ಅವರ ಆಸ್ತಿ ನನಗೇ ಸೇರಿದ್ದು ಎಂದು ಕೃಷ್ಣಮೂರ್ತಿ ವಾದಿಸಿದ್ದಾರೆ.