ಬೀಜಿಂಗ್: ಡೊಕ್ಲಾಂ ಗಡಿಯಲ್ಲಿ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದ್ದರೂ ಭಾರತದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಗಡಿ ಪ್ರದೇಶಕ್ಕೆ ಭೇಟಿ ನೀಡಿ ಚೀನಾ ಸೈನಿಕರೊಂದಿಗೆ ಮಾತನಾಡಿರುವುದು ಚೀನಾದ ಮಾಧ್ಯಮಗಳಿಂದಲೇ ಪ್ರಶಂಸೆಗೆ ಕಾರಣವಾಗಿದೆ.
ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಡಿಗೆ ಭೇಟಿ ನೀಡಿ ಭಾರತ ಹಾಗೂ ಚೀನಾದ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದರು. ಪರಿಸ್ಥಿತಿ ಶಾಂತಗೊಳಿಸಲು ನಿರ್ಮಲಾ ಅವರು ಪ್ರಯತ್ನಿಸಿದ್ದಾರೆ. ಈ ನಡೆಯಿಂದ ಅವರು ಭಾರತ ಒಂದು ಸೌಹಾರ್ದ ರಾಷ್ಟ್ರವೆಂದು ಹೇಳಬಯಸಿದ್ದರು.
ನಿರ್ಮಲಾ ಅವರ ನಡೆ ಹೃದಯಸ್ಪರ್ಶಿಯಾಗಿತ್ತು. ಚೀನಾ ಪ್ರಜೆಗಳು ಮತ್ತು ಸೈನಿಕರು ಗಡಿಯಲ್ಲಿ ಶಾಂತಿ ಬಯಸುವರು. ಭಾರತದ ಇದೇ ನಡೆ ಮುಂದುವರಿದರೆ ಭವಿಷ್ಯದಲ್ಲಿ ಮತ್ತೆ ಡೊಕ್ಲಾಂ ವಿವಾದ ತಲೆದೋರಲ್ಲ. ಇದನ್ನು ಭಾರತ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬೀಜಿಂಗ್ ಎಂದಿಗೂ ಭಾರತದೊಂದಿಗೆ ಸ್ನೇಹ ಬಯಸುತ್ತದೆಯೇ ಹೊರತು ಯುದ್ಧವನಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಡೊಕ್ಲಾಂ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸೌಹಾರ್ದ ಕದಡಿತ್ತು. ಗಡಿಯಲ್ಲಿ ಉಭಯ ಸೈನಿಕರು ಕಲ್ಲು ತೂರಾಟ ಮತ್ತು ಪರಸ್ಪರ ಕೈ ಮಿಲಾಯಿಸುವ ತನಕ ಬಂದಿದ್ದರು. ಭಾರತ ಮತ್ತು ಚೀನಾ ಮಧ್ಯೆ ಯುದ್ಧ ಸಂಭವಿಸಿಯೇ ಬಿಡುತ್ತದೆ ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿ ಎರಡು ರಾಷ್ಟ್ರಗಳು ಗಡಿಯಲ್ಲಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದವು.