ಲಕ್ನೋ: ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯು ಗರೀಬಿ ಹಠಾವೋ ಯೋಜನೆಯಂತೆ ಕಾಂಗ್ರೆಸ್ ನ ನಕಲಿ ಯೋಜನೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಟೀಕಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಸೋಮವಾರ ಛತ್ತೀಸಗಡದಲ್ಲಿ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.
ಇಂದು ಪತ್ರಿಕಾಗೋಷ್ಠಿ ನಡೆಸಿರುವ ಮಾಯಾವತಿ ಅವರು, ಕಾಂಗ್ರೆಸ್ ಪಕ್ಷದ ಬಡತನ ನಿರ್ಮೂಲನೆ ಯೋಜನೆಯಂತೆ ಇದು ಕೂಡ ನಕಲಿ ಯೋಜನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಜನರಿಗೆ ಕೊಟ್ಟ ಭರವಸೆ ಈಡೇರಿಸಲ್ಲ. 2014ರಲ್ಲಿ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆಯನ್ನು ಮೋದಿ ಕೊಟ್ಟಿದ್ದರು. ಆದರೆ ಜನರ ಖಾತೆಗೆ 15 ಲಕ್ಷ ಬಂದಿದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.