ಭೋಪಾಲ್: ಎಟಿಎಂನಲ್ಲಿ ಹಣ ತೆಗೆಯುವುದು ಸುರಕ್ಷಿತವಲ್ಲವೆನ್ನುವುದು ಹಲವಾರು ಸಲ ಸಾಬೀತಾಗಿದೆ. ಭೋಪಾಲ್ ನಲ್ಲಿ ನಡೆದ ಘಟನೆ ಇದಕ್ಕೆ ಮತ್ತೊಂದು ಸೇರ್ಪಡೆ.
ಎಟಿಎಂನಲ್ಲಿ ಹಣ ತೆಗೆಯಲು ಬಂದ ದಂಪತಿಯ ಮಗುವಿನ ತಲೆಗೆ ಗನ್ ಇಟ್ಟ ಮುಸುಕುಧಾರಿಯೊಬ್ಬ ಹಣ ದೋಚಿರುವಂತಹ ಘಟನೆ ಇಲ್ಲಿನ ಇಂದೋರ್ ನಲ್ಲಿ ನಡೆದಿದೆ.
ಡಿಸೆಂಬರ್ 24ರಂದು ಇಂದೋರ್ ನ ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಎಟಿಎಂನಲ್ಲಿ ರಾತ್ರಿ 8.30ರ ವೇಳೆಗೆ ಈ ಘಟನೆ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಣದ ತೆಗೆಯಲು ಬಂದ ವ್ಯಕ್ತಿಗೆ ಗನ್ ತೋರಿಸಿ ಮುಸುಕುಧಾರಿಯು ಹಣ ಕೀಳುತ್ತಾನೆ. ಇದರ ಬಳಿಕ ತಾಯಿ ಜತೆ ಎಟಿಎಂ ಒಳಗೆ ನಿಂತಿದ್ದ ಮಗುವಿನ ತಲೆಗೆ ಗನ್ ಇಟ್ಟು ಮತ್ತಷ್ಟು ಹಣ ತೆಗೆದುಕೊಡಲು ಸೂಚಿಸುತ್ತಾನೆ. ಈ ವೇಳೆ ವ್ಯಕ್ತಿಯು ಹಣ ತೆಗೆದು ಮುಸುಕುಧಾರಿಗೆ ನೀಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಸುಕುಧಾರಿಯು ನನಗೆ ಗನ್ ತೋರಿಸಿ ಹಣ ನೀಡುವಂತೆ ಹೇಳಿದ. ಆದರೆ ನಾನು ನಿರಾಕರಿಸಿದಾಗ ಮಗುವಿನ ತಲೆಗೆ ಗನ್ ಇಟ್ಟ. ಯಾರಾದರೂ ಬರಬಹುದು ಎನ್ನುವ ಆಶಯದೊಂದಿಗೆ ತಪ್ಪು ಪಿನ್ ಹಾಕಿದೆ. ಆದರೆ ಯಾರೂ ಬರಲಿಲ್ಲ. ನನಗೆ ಬೇರೆ ದಾರಿಯಿರಲಿಲ್ಲ. ನಾನು ಎಫ್ ಐಆರ್ ದಾಖಲಿಸಿದ್ದೇನೆ ಎಂದು ದರೋಡೆಗೊಳಗಾದ ವ್ಯಕ್ತಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಇಂದೋರ್ ಎಸ್ ಪಿ, 5-6 ಜನರನ್ನು ನಾವು ಸುತ್ತುವರಿದಿದ್ದೇವೆ. ಮುಖಕ್ಕೆ ಮುಸುಕು ಹಾಕಿರುವ ಕಾರಣ ಆತನ ಪತ್ತೆಗೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.