ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಚಟುವಟಿಕೆಗಳು ಪ್ರಾರಂಭವಾಗಿದ್ದು, ಶೋಫಿಯಾನ್ ಎನ್ಕೌಂಟರ್ ಬೆನ್ನಲ್ಲೇ ಇದೀಗ ಶ್ರೀನಗರದ ಬಾರಮುಲ್ಲಾ ವಲಯದಲ್ಲಿ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪೊಲೀಸರು ಹುತಾತ್ಮರಾಗಿದ್ದಾರೆ.
ಹೊದಿಕೆ ಹೊದ್ದು ಸಹಜವಾಗಿಯೇ ನಡೆದುಬಂದ ಉಗ್ರರು ಏಕಾಏಕಿ ಗನ್ ತೆಗೆದು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹಾಗೂ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಭಯಾನಕ ದೃಶ್ಯ ಅಲ್ಲೇ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಅಂತೆಯೇ ಇನ್ನೊಂದೆಡೆ, ಮೂವರು ಉಗ್ರರು ಸೇನೆಯ ಗುಂಡಿಗೆ ಆಹುತಿಯಾಗಿದ್ದಾರೆ . ಸೋಫಿಯಾನ್ ಸಮೀಪದ ಬದ್ಧಾಂ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ . ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ .
ಜಮ್ಮು ಕಾಶ್ಮೀರ ಪೊಲೀಸ್ ಪಡೆ ಮತ್ತು ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ . ಜಮ್ಮು ಕಾಶ್ಮೀರಕ್ಕೆ ವಿದೇಶಿ ರಾಜತಾಂತ್ರಿಕರ ಭೇಟಿಯ ಮರು ದಿನವೇ ಈ ಘಟನೆ ನಡೆದಿದೆ . ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪಾಕಿಸ್ತಾನ ಹೊಸ ತಂತ್ರಗಳ ಮೊರೆ ಹೋಗುತ್ತಿದೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಗೆ ದೊರೆತಿದೆ ಎಂದು ವರದಿಗಳು ತಿಳಿಸಿವೆ.