ಕೀವ್: ಇಂದು ರಾತ್ರಿಯಿಂದ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಂದು 480 ಭಾರತೀಯರ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮೂರನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಇಂದು ರಾತ್ರಿ ರೊಮಾನಿಯಾದ ಬುಕಾರೆಸ್ಟ್ ಗೆ ಎರಡು ವಿಮಾನಗಳು ತೆರಳಲಿದ್ದು, ಮತ್ತೊಂದು ವಿಮಾನ ಹಂಗೇರಿಯಾದ ಬುಡಾಪೆಸ್ಟ್ ಗೆ ತೆರಳಲಿದೆ.
ಒಟ್ಟು ಮೂರು ವಿಮಾನಗಳ ಮೂಲಕ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ವಿಮಾನ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದ್ದು, ಉಚಿತವಾಗಿ ಭಾರತೀಯರನ್ನು ಉಕ್ರೇನ್ ನಿಂದ ಏರ್ ಲಿಫ್ಟ್ ಮಾಡಲಾಗುತ್ತಿದೆ.