ಅಮೇಠಿ: ತನ್ನ ಸಂಸದೀಯ ಕ್ಷೇತ್ರ ಅಮೇಠಿಗೆ ಭೇಟಿ ನೀಡಿದ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ರಾಜೀವ್ ಗಾಂಧಿ ಫೌಂಡೇಶನ್ ಗೆ ಭೂಮಿ ನೀಡಿರುವ ಸಂತ್ರಸ್ತ ರೈತರು ತಮಗೆ ಉದ್ಯೋಗ ಒದಗಿಸಬೇಕು ಅಥವಾ ತಮ್ಮ ಭೂಮಿಯನ್ನು ವಾಪಸ್ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಅಮೇಠಿಯ ರೈತ ಗೌರಿಗಂಜ್ ಅವರು, ನಮಗೆ ರಾಹುಲ್ ಗಾಂಧಿ ಅವರಿಂದ ತುಂಬಾ ಬೇಸರವಾಗಿದೆ. ಅವರು ಇಟಲಿಗೆ ಹಿಂತಿರುಗಲಿ. ಅವರು ಇಲ್ಲಿರಲು ಅರ್ಹರಲ್ಲ. ರಾಹುಲ್ ನಮ್ಮ ಭೂಮಿ ಕಬಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಲೋಕಸಭೆ ಚುನಾವಣೆಗೆ ಪ್ರಚಾರಕ್ಕೆ ಬಂದಿರುವಂತಹ ರಾಹುಲ್ ಗಾಂಧಿ ರೈತರ ಪ್ರತಿಭಟನೆ ಎದುರಿಸುವಂತಾಯಿತು.
ಅಮೇಠಿಯಲ್ಲಿ ಸಂಸತ್ತರಾಗಿದ್ದ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸಮರ್ಥ್ ಸೈಕಲ್ ಫ್ಯಾಕ್ಟರಿಗಾಗಿ ಶಿಲಾನ್ಯಾಸ ಮಾಡಿದ್ದರು. ಇದಕ್ಕಾಗಿ ಸುಮಾರು 65.57 ಎಕ್ರೆಯ ಜಮೀನನ್ನು 1980ರಲ್ಲಿ ಜೈನ್ ಸೋದರರು ಸ್ವಾದೀನ ಮಾಡಿಕೊಂಡಿದ್ದರು. ಆದರೆ ಕಂಪೆನಿಯು ನಷ್ಟವಾಗಿ 2014ರಲ್ಲಿ ಜಮೀನಿನ ಹರಾಜು ನಡೆದಿತ್ತು.