ವಿಜಯಪುರ: ಪ್ರೀತಿಸಿದ ಹುಡುಗಿಯೇ ಬೇಕು‌ ಎಂದ ಪ್ರಿಯಕರನಿಗೆ ಯುವತಿಯ ಮನೆಯವರೇ ತಲೆಗೆ ರಾಡ್‌ನಿಂದ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

ರಾಹುಲ್ ರಾಮನಗೌಡ ಬಿರಾದಾರ ಹಾಗೂ ಐಶ್ವರ್ಯ ಇಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದಾಗ ರಾಹುಲ್‌ ಮನೆಯವರಿಗೆ ಐಶ್ವರ್ಯ ತಂದೆ ಬರಲು ಹೇಳಿದ್ದರು. ಆದರೆ ಹುಡುಗನ ಮನೆಯವರು ಬಂದಾಗ ಅವನ ಗುಣ ಸರಿ ಇಲ್ಲ, ನಾನು ಮದುವೆ ಆಗಲ್ಲ ಎಂದು ಐಶ್ವರ್ಯ ನಿರಾಕರಿಸಿದ್ದಳು.

ಹುಡುಗಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ರಾಹುಲ್‌ ಕುಟುಂಬದವರು ವಾಪಸ್ ಆಗಿದ್ದರು. ಇತ್ತ ಪ್ರೀತಿಸಿದ ಹುಡುಗಿಯೇ ಬೇಕು ಎಂದು ಹಠ ಹಿಡಿದ ರಾಹುಲ್‌ ಮತ್ತೆ ಹುಡುಗಿ ಮನೆಗೆ ಹೋಗಿದ್ದನು.

ಮದುವೆ ಆಗದಿದ್ದರೆ ನನ್ನೊಟ್ಟಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನಂತೆ. ಇತ್ತ ಐಶ್ವರ್ಯ ತಂದೆ ಮಗಳು ಒಪ್ಪಿದರೆ ಮದುವೆ ಮಾಡಿ ಕೊಡುವುದಾಗಿ ಹೇಳಿ ರಾಜಿ ಪಂಚಾಯ್ತಿ ಮಾಡಿ ವಾಪಸ್ ಕಳುಹಿಸಿದ್ದಾರೆ.

ಪೆಟ್ರೋಲ್‌ ಎರಚಿ ಸುಡಲು ಬಂದಾಗ ನಮ್ಮ ತಮ್ಮ ಹಾಗೂ ತಮ್ಮನ ಹೆಂಡತಿ, ಮನೆ ಕೆಲಸದವನ ಮಗ ಬಿಡಿಸಲು ಬಂದವನಿಗೂ ಬೆಂಕಿ ತಗುಲಿದೆ ಎಂದು ಆರೋಪಿಸಿದ್ದಾರೆ.ಇತ್ತ ರಾಹುಲ್‌ ತಂದೆಯ ಆರೋಪವೇ ಬೇರೆಯಾಗಿದೆ. ನಮ್ಮ ಮಗನನ್ನು ಮನೆಗೆ ಕರೆದು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಮಗನಿಗೆ ಮೊದಲು ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಮೊಬೈಲ್ ಕೊಡದೇ ಇದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪೆಟ್ರೋಲ್ ಸುರಿದಿದ್ದಾರೆ ಎಂದಿದ್ದಾರೆ.

ಸುಟ್ಟು ಗಾಯದಿಂದ ಬಳಲುತ್ತಿರುವ ರಾಹುಲ್‌ಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಹುಲ್‌ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಶೇ 70ರಷ್ಟು ದೇಹ ಸುಟ್ಟು ಹೋಗಿದೆ ಎಂದು ಹೇಳಿದ್ದಾರೆ. ಹುಡುಗಿ ತಂದೆ ಹಾಗೂ ಅವರ ಕುಟುಂಬದವರೇ ನಮ್ಮ ಅಣ್ಣನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ರಾಹುಲ್‌ ಸಹೋದರ ಐಶ್ವರ್ಯ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಎರಡು ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಎರಡು ಕುಟುಂಬದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರಲ್ಲಿ ತಪ್ಪು ಯಾರದು ಎಂಬುದು ಪೊಲೀಸ್ ತನಿಖೆನಿಂದ ತಿಳಿಯಬೇಕಿದೆ ಎಂಬ ಮಾಹಿತಿ ತಿಳಿದು ಬಂದಿದೆ.