ವಿಜಯಪುರ: ಬೈಕ್ ವ್ಹೀಲಿಂಗ್ ಹುಚ್ಚಿಗೆ ನಾಲ್ವರು ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ನಿಂಗರಾಜ ಚೌಧರಿ (22), ಉದಯಕುಮಾರ್ ಪ್ಯಾಟಿ (19), ಅನಿಲ್ ಕೈನೂರು(27), ರಾಯಪ್ಪ ಬಾಗೇವಾಡಿ (24) ಸಾವನ್ನಪ್ಪಿದ್ದಾರೆ. ಮಗಲದಿನ್ನಿ ಗ್ರಾಮದ ಹನುಮಂತಪ್ಪ ಕುರಬಗೌಡರ, ಪ್ರಶಾಂತ್ ಕುರಬಗೌಡರ, ಶಾಹೀದ್ ಹುನಗುಂದ, ಶಂಕ್ರಪ್ಪ ಕೊಂಡಗೂಳಿ ಗಾಯಾಗೊಂಡಿದ್ದಾರೆ.

ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಹಿನ್ನೆಲೆ ವಿವಿಧ ಶಕ್ತಿ ಪ್ರದರ್ಶನ ಸ್ಪರ್ಧೆ ಆಯೋಜನೆ‌ ಮಾಡಲಾಗಿತ್ತು. ಈ ಸ್ಪರ್ಧೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಿಂಗರಾಜ ಚೌಧರಿ ತನ್ನ ಬೈಕ್​ನಲ್ಲಿ ಮೂವರನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಾ ಬಂದು ಆಯತಪ್ಪಿ ರಸ್ತೆ ಬದಿಯಲ್ಲಿದ್ದವರಿಗೆ ಗುದ್ದಿದ್ದಾರೆ.

ವೀಲ್ಹಿಂಗ್​ ಹುಚ್ಚಾಟಕ್ಕೆ ಬೈಕ್​​​ನಲ್ಲಿದ್ದವರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲಗಲದಿನ್ನಿ ಗ್ರಾಮದ 24 ವರ್ಷದ ರಾಯಪ್ಪ ಬಾಗೇವಾಡಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.  ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.