ವಿಶಾಖಪಟ್ಟಣಂ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಗುರುವಾರ ಆರ್ಕೆ ಬೀಚ್ನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಸೀ ಹ್ಯಾರಿಯರ್ ಮ್ಯೂಸಿಯಂ ಅನ್ನು ಉದ್ಘಾಟಿಸಿದರು.
ಇದು ಇತ್ತೀಚಿನ ರಕ್ಷಣಾ-ಸಂಬಂಧಿತ ಯೋಜನೆಯಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಬೀಚ್ ಈಗಾಗಲೇ ಟಿಯು 142 ಏರ್ಕ್ರಾಫ್ಟ್ ಮ್ಯೂಸಿಯಂ ಮತ್ತು ಐಎನ್ಎಸ್ ಕುರ್ಸುರಾ ಜಲಾಂತರ್ಗಾಮಿ ವಸ್ತುಸಂಗ್ರಹಾಲಯವನ್ನು ಹೊಂದಿದೆ. ವಿಶಾಖಪಟ್ಟಣಂ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ 10 ಕೋಟಿ ರೂಪಾಯಿ ವೆಚ್ಚದಲ್ಲಿ ಸೀ ಹ್ಯಾರಿಯರ್ ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸಿದೆ.
ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ ನಂತರ, ಮುಖ್ಯಮಂತ್ರಿ ಭಾರತೀಯ ನೌಕಾಪಡೆಯ ಅಧಿಕಾರಿಗಳೊಂದಿಗೆ ಆವರಣವನ್ನು ವೀಕ್ಷಿಸಿದರು. ಮ್ಯೂಸಿಯಂಗಾಗಿ ಯುದ್ಧ ವಿಮಾನವನ್ನು ಗೋವಾದಿಂದ ವಿಶಾಖಪಟ್ಟಣಕ್ಕೆ ತರಲಾಗಿದೆ.
ವಿಮಾನ ಮತ್ತು ಸಿಮ್ಯುಲೇಟರ್ನ ಭಾಗಗಳನ್ನು ಸಹ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಈಸ್ಟರ್ನ್ ನೇವಲ್ ಕಮಾಂಡ್ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್ ಗುಪ್ತಾ ಅವರು ಮುಖ್ಯಮಂತ್ರಿಗೆ ಸಾಥ್ ನೀಡಿದರು. ಉಪಮುಖ್ಯಮಂತ್ರಿ ಬೂದಿ ಮುತ್ಯಾಲ ನಾಯ್ಡು, ಸಚಿವರಾದ ಆಡಿಮುಳಪು ಸುರೇಶ್, ವಿಡದಾಳ ರಜಿನಿ, ಗುಡಿವಾಡ ಅಮರನಾಥ್, ಆರ್. ರೋಜಾ ಸಹ ಉಪಸ್ಥಿತರಿದ್ದರು.
ಇದೇ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ವೈ.ಎಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಲ್ಲದೆ ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) ಸದಸ್ಯರೊಂದಿಗೆ ಸಂವಾದ ನಡೆಸಿದರು.
ಮಹಿಳಾ ಕ್ರಿಕೆಟಿಗರಾದ ಶಬ್ನಮ್ ಮತ್ತು ಕೆ.ಅಂಜಲಿ ಸರ್ವಾಣಿ ಅವರು ಸ್ಟೇಡಿಯಂ ಆವರಣದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಅವರ ಕ್ರೀಡಾ ಸಾಧನೆಯನ್ನು ಮುಖ್ಯಮಂತ್ರಿ ಶ್ಲಾಘಿಸಿದರು. ಎಸಿಎ ಪರವಾಗಿ ಆಟಗಾರರಿಗೆ ತಲಾ 10 ಲಕ್ಷ ರೂ. ನೆರವು ನೀಡಿದರು. ಅಲ್ಲದೆ ಮುಖ್ಯಮಂತ್ರಿ ಜಗನ್ ಆಂಧ್ರ ಪ್ರೀಮಿಯರ್ ಲೀಗ್ ಸೀಸನ್-2 ಗೆ ಚಾಲನೆ ನೀಡಿದರು.