ಮುಂಬೈ: ನಿವೃತ್ತಿ ಬಗ್ಗೆ ನಾನಿನ್ನೂ ಯೋಚಿಸಿಲ್ಲ, ಭಾರತಕ್ಕಾಗಿ ಇನ್ನಷ್ಟು ಜಾಗತಿಕ ಟ್ರೋಫಿಗಳನ್ನು ಗೆಲ್ಲುವ ಹಸಿವು ಈಗಲೂ ಇದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
“ಬ್ರೇಕ್ಫಾಸ್ಟ್ ವಿದ್ ಚಾಂಪಿಯನ್ಸ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಹಿತ್, ಭಾರತಕ್ಕಾಗಿ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆಲ್ಲುವುದರತ್ತ ನಾನೀಗ ಗಮನ ಕೇಂದ್ರೀಕರಿಸಿದ್ದೇನೆ ಎಂದು ಹೇಳಿದರು.
“ನಾನು ನಿವೃತ್ತಿ ಬಗ್ಗೆ ಯೋಚಿಸಿಯೇ ಇಲ್ಲ. ಆದರೆ, ಬದುಕು ನಮ್ಮನ್ನು ಎಲ್ಲಿಗೆ ಒಯ್ಯುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಈಗ ನಾನು ಚೆನ್ನಾಗಿ ಆಡುತ್ತಿದ್ದೇನೆ. ಹಾಗಾಗಿ, ಇನ್ನೂ ಕೆಲವು ವರ್ಷಗಳ ಹೀಗೆ ಸಾಗುತ್ತದೆ ಎಂದು ನಾನು ಯೋಚಿಸಿದ್ದೇನೆ. ಬಳಿಕ, ನನಗೆ ಗೊತ್ತಿಲ್ಲ. ವಿಶ್ವಕಪ್ ಗೆಲ್ಲಲು ನಾನು ಬಯಸಿದ್ದೇನೆ. ಬಳಿಕ 2025ರಲ್ಲಿ ಡಬ್ಲ್ಯುಟಿಸಿ ಫೈನಲ್ ಇದೆ. ಭಾರತ ಅಲ್ಲಿಗೆ ಹೋಗುತ್ತದೆ ಎಂದು ನಾನು ಆಶಿಸಿದ್ದೇನೆ” ಎಂದರು.