ಗುಜರಾತ್: ವಿಷಕಾರಿ ದ್ರವ ಸೇವನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಯಾಂಕ್ ಅಗರ್ವಾಲ್ ಫೆ.೨ರಿಂದ ಶುರುವಾಗಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಪಂದ್ಯದಲ್ಲಿ ಕರ್ನಾಟಕದ ತಂಡವನ್ನು ಯುವ ಆಟಗಾರ ನಿಕಿನ್ ಜೋಸ್ ಮುನ್ನಡೆಸುವ ಸಾಧ್ಯತೆಯಿದೆ.
ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ಸೂರತ್ ಗೆ ತೆರಳಲು ಇಂಡಿಗೋ ವಿಮಾನವೇರಿತ್ತು. ಈ ವೇಳೆ ವಿಮಾನದಲ್ಲಿದ್ದ ದ್ರವವನ್ನು ನೀರೆಂದು ಭಾವಿಸಿ ಸೇವಿಸಿದ ಮಯಾಂಕ್ ರ ಗಂಟಲಲ್ಲಿ ಉರಿ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಬಾಯಲ್ಲಿ ಊತ ಹಾಗೂ ಸುಟ್ಟು ಗಾಯಗಳು ಕಂಡು ಬಂದಿದೆ ಎಂದು ವರದಿಯಾಗಿದ್ದು, ಮುಂದಿನ 48 ಗಂಟೆಗಳ ಕಾಲ ಅವರಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಯಾಂಕ್ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕರ್ನಾಟಕ ತಂಡದ ಮ್ಯಾನೇಜರ್ ರಮೇಶ್ ತಿಳಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.