ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯದ ಐಪಿಎಲ್ ಟಿಕೆಟ್ ಪಡೆಯಲು ಹೋಗಿ ವಂಚನೆಗೊಳಗಾಗಿ ಟೆಕ್ಕಿಯೊಬ್ಬರು 1.46 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.

ಟೆಕ್ಕಿ ಐಪಿಎಲ್ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿದ್ದ ಒಂದು ಪೋಸ್ಟ್ ಅನ್ನು ನೋಡಿದ್ದಾರೆ. ಆ ಪೋಸ್ಟ್ ನೋಡಿ ಆಮಿಷಕ್ಕೆ ಒಳಗಾದ ಅವರು, ಪೋಸ್ಟ್ ಹಾಕಿದ ವಂಚಕನನ್ನು ಸಂಪರ್ಕಿಸಿದ್ದಾರೆ. ವಂಚಕ ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್‌ಗಳು ಮತ್ತು ವಿಐಪಿ ಸೌಲಭ್ಯಗಳನ್ನು ಹೊಂದಿರುವ ಟಿಕೆಟ್‌ಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಇದನ್ನು ನಂಬಿದ ಟೆಕ್ಕಿ, ತಾನು ಮತ್ತು ತನ್ನ ತಾಯಿಯ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಾವತಿಸಿದ್ದಾರೆ.

ಆರಂಭಿಕ ಹಣ ಪಾವತಿಯ ನಂತರ, ವಂಚಕನು ಟೆಕ್ಕಿಗೆ ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರಲು ಸೂಚಿಸಿದ್ದಾನೆ. ಅಲ್ಲಿಗೆ ತಲುಪಿದಾಗ, ಟೆಕ್ಕಿ ಕನಿಷ್ಠ ದರದ ಟಿಕೆಟ್‌ಗಳನ್ನು ಕೇಳಿದ್ದಾರೆ. ಆದರೆ, ವಂಚಕನು ಕೂಪನ್‌ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.

ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ಟಿಕೆಟ್ ಆಮಿಷವೊಡ್ಡಿ, ಇನ್‌ಸ್ಟಾಗ್ರಾಮ್ ಮೂಲಕ ಟೆಕ್ಕಿಯೊಬ್ಬರಿಂದ 1.46 ಲಕ್ಷ ರೂ. ವಂಚನೆ ಮಾಡಲಾಗಿದೆ. ಹಣ ಪಾವತಿಯಾದ ಬ್ಯಾಂಕ್ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.