ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತ ಚೀನಾ ಸಂಘರ್ಷದ ಬಳಿಕ ಉಭಯ ದೇಶಗಳ ಸಂಬಂಧ ಹಳಸಿದೆ. ಅದೇ ರೀತಿ ನವದೆಹಲಿಯಲ್ಲಿ ನಡೆದ ಜಿ.20 ಶೃಂಗಸಭೆಯಲ್ಲಿಯೂ ಕೂಡ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಇದೀಗ ಅರುಣಾಚಲ ಪ್ರದೇಶದ ಮೂವರು ವುಶು ಪಟುಗಳಿಗೆ ಚೀನಾ ವೀಸಾ ನಿರಾಕರಿಸಿದ್ದು, ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.
ಚೀನಾದ ಈ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಅರುಣಾಚಲ ತನ್ನ ದೇಶಕ್ಕೆ ಸೇರಬೇಕು ಎಂದು ಪ್ರತಿಪಾದಿಸುವ ಚೀನಾ, ರಾಜತಾಂತ್ರಿಕ ವಿಚಾರವನ್ನು ಕ್ರೀಡೆಯೊಂದಿಗೆ ಬೆರೆಸಿರುವುದಕ್ಕೆ ಕ್ರೀಡಾಭಿಮಾನಿಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ.
ಅರುಣಾಚಲ ಪ್ರದೇಶ ಮೂಲದ ನೈಮನ್ ವ್ಯಾಂಗ್ಶೂ, ಓನಿಲ್ ತೆಗಾ ಹಾಗೂ ಮೆಪುಂಗ್ ಲಮ್ಗೂ ಈ ಮೂವರು ಇದೀಗ ಹಾಂಗ್ಝೋನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.