ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಿಯಾದ ತರಬೇತಿ ಅದರಲ್ಲೂ ಸರಕಾರಿ ಶಾಲೆಯ ಮಕ್ಕಳಿಗೆ ಲಭಿಸಿದರೆ ಅವರು ಸಾಧನೆಯ ಉತ್ತುಂಗಕ್ಕೆ ತಲುಪಬಹುದು ಎನ್ನುವುದಕ್ಕೆ ಬಂದಾರು ಶಾಲೆ ಮತ್ತು ಅಲ್ಲಿನ ವಿದ್ಯಾರ್ಥಿನಿಯರು ಸಾಕ್ಷಿ.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ವಾಲಿಬಾಲ್ ಟೂರ್ನಿಯಲ್ಲಿ 7 ಬಾರಿ ರಾಷ್ಟ್ರಮಟ್ಟಕ್ಕೆ ಪ್ರವೇಶ, ಸತತ 10 ಬಾರಿ ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯುವ ಮೂಲಕ ಬೆಳ್ತಂಗಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಅಪೂರ್ವ ಸಾಧನೆ ಮಾಡಿದ್ದಾರೆ.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಅವರು ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಆಸಕ್ತಿ ಗಮನಿಸಿ ಅವರನ್ನು ನಿರಂತರ ತರಬೇತಿಗೊಳಿಸಿದ ಪರಿಣಾಮ ಈ ಶ್ರೇಷ್ಠ ಸಾಧನೆ ಮೂಡಿಬಂದಿದೆ.
ಈಚೆಗೆ ಕಡೂರಿನಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ವಿಭಾಗ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಈ ಶಾಲೆಯ ವಿದ್ಯಾರ್ಥಿನಿಯರು ಕೊಡಗು ತಂಡವನ್ನು 2-0 ಅಂಕಗಳಿಂದ, ಸೆಮಿಪೈನಲ್ನಲ್ಲಿ ಉಡುಪಿ ತಂಡವನ್ನು 2-0 ಅಂಕಗಳಿಂದ, ಹಾಗೂ ಫೈನಲ್ನಲ್ಲಿ ಮಂಡ್ಯ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಫೈನಲ್ನಲ್ಲಿ ಬಲಿಷ್ಠ ಮಂಡ್ಯ ತಂಡವನ್ನು 25 12, 25-10 ನೇರ ಸೆಟ್ಗಳಲ್ಲಿ ಮಣಿಸಿರುವುದು ವಿದ್ಯಾರ್ಥಿಗಳ ಆಟದ ಕೌಶಲಕ್ಕೆ ಸಾಕ್ಷಿಯಾಗಿದೆ.
ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ 9.30 ರವರೆಗೆ, ಸಂಜೆ 3.45 ರಿಂದ 5 ರವರೆಗೆ ಹಾಗೂ ರಜಾ ದಿನಗಳಲ್ಲಿ ತರಬೇತಿಯಲ್ಲಿ ನಿರತರಾಗುವ ವಿದ್ಯಾರ್ಥಿಗಳು ಸಾಧಿಸಲೇಬೇಕು ಎಂಬ ಹಠವನ್ನು ಬೆಳೆಸಿಕೊಂಡಿದ್ದಾರೆ.
‘ಸರ್ಕಾರಿ ಶಾಲೆಯ ವಾಲಿಬಾಲ್ ತಂಡವೊಂದು ಸತತ 10 ಬಾರಿ ರಾಜ್ಯಮಟ್ಟಕ್ಕೆ ಪ್ರವೇಶ ಪಡೆದಿರುವುದು ಇಡೀ ಊರಿಗೆ ಸಂತೋಷ ತಂದಿದೆ. ವಿದ್ಯಾರ್ಥಿಗಳನ್ನು ತರಬೇತುಗೊಳಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಶ್ರಮ ದೊಡ್ಡದಿದೆ. ಮಕ್ಕಳ ಸಾಧನೆಯೇ ಅವರಿಗೆ ಪ್ರಶಸ್ತಿಯಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು, ಸ್ಥಳೀಯರು.
ಪ್ರೋತ್ಸಾಹ ಅಗತ್ಯ
ಬಲಿಷ್ಠ ಕ್ರೀಡಾ ತಂಡವನ್ನು ಕಟ್ಟಿ ಬೆಳೆಸಬೇಕಾದರೆ ಅದಕ್ಕೆ ಅಪಾರ ಶ್ರಮದ ಜೊತೆ ಆರ್ಥಿಕ ಹೊರೆಯೂ ಸಾಕಷ್ಟಿದೆ. ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆಯಿಂದ ಬರುವ ಅನುದಾನದಲ್ಲಿ ಕ್ರೀಡೆಗೆ ಸಿಗುವುದು ಅಷ್ಟಕ್ಕಷ್ಟೇ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ, ರಾಷ್ಟ್ರಮಟ್ಟದಲ್ಲಿ ಮಿಂಚುವ ಸಾಮರ್ಥ್ಯ ಇರುವ ಈ ಬಡ ಕುಟುಂಬಗಳ ವಿದ್ಯಾರ್ಥಿಗಳ ಕ್ರೀಡಾ ಆಸಕ್ತಿಗೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ.
ನನ್ನ ಶಾಲೆಯ ವಿದ್ಯಾರ್ಥಿಗಳ ಸಾಧನೆ ಬಹಳ ಖುಷಿ ನೀಡಿದೆ. ಶಾಲಾ ಮುಖ್ಯ ಶಿಕ್ಷಕರ ಪ್ರೋತ್ಸಾಹ, ವಿದ್ಯಾರ್ಥಿಗಳ ಉತ್ಸಾಹ, ಹೆತ್ತವರ ಮತ್ತು ಊರವರ ಸಹಕಾರ ಇಲ್ಲಿಯ ವಿದ್ಯಾರ್ಥಿಗಳನ್ನು ಈ ಮಟ್ಟಕ್ಕೆ ಬೆಳೆಸಲು ಕಾರಣವಾಗಿದೆ
ಪ್ರಶಾಂತ್ ದೈಹಿಕ ಶಿಕ್ಷಣ ಶಿಕ್ಷಕ
ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಶಿಕ್ಷಕರ ಶ್ರಮ ಅನನ್ಯವಾದುದು. ಕಳೆದ 15 ವರ್ಷಗಳಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಶ್ರಮಕ್ಕೆ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿ ಬಾರದೇ ಇರುವುದು ಬೇಸರವಿದೆ.
-ಮಂಜು ನಾಯ್ಕ, ಶಾಲಾ ಮುಖ್ಯೋಪಾಧ್ಯಾಯರು