ಪುತ್ತೂರು: ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದ ಮಕ್ಕಳು ರಾಜ್ಯದಲ್ಲಿಯೇ ಅತಿ ಹೆಚ್ಚು ಪದಕ ಗೆದ್ದ ಕೀರ್ತಿ ಹೊಂದಿದ್ದಾರೆ. ಮೂರು ವರ್ಷಗಳಲ್ಲಿ ತಾಲೂಕಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಪದಕವೇ, 1,500 ಸಾವಿರಕ್ಕೂ ಮಿಕ್ಕಿ. ಅಂತಹ ಸಾಧಕ ಮಕ್ಕಳಿಗೂ ಅನುಕೂಲಕರವೆನಿಸಿದ್ದ ಬಾಲವನದಲ್ಲಿರುವ ಸರಕಾರಿ ಜಿಮ್ ಗೆ ಅನಾಥ ಭಾವ ಕಾಡಿದೆ..!
ಜಿಮ್ ಹಿನ್ನಲೆ
ಈಜು ಕೊಳದ ಜತೆಗೆ ಫಿಟ್ನೆಸ್ಗೆ ಜಿಮ್ ಆವಶ್ಯಕತೆ ಕುರಿತು ಈಜು ಕೊಳದ ಮೇಲುಸ್ತುವಾರಿ ವಹಿಸಿಕೊಂಡವರು, ಬೇಡಿಕೆಯನ್ನು ಶಾಸಕಿ ಅವರ ಗಮನಕ್ಕೆ ತಂದಿದ್ದರು. ಪುತ್ತೂರು ಶಾಸಕಿ ಶಕುಂತಳಾ.ಟಿ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಅಂದಿನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರ ಸಹಕಾರದಿಂದ 10 ಲಕ್ಷ ರೂ. ಮಂಜೂರುಗೊಂಡಿತ್ತು.
ಜಿಮ್ ಪರಿಕರಗಳು ಕೂಡ ಬಾಲವನಕ್ಕೆ ಬಂತು. ವರ್ಷದ ಹಿಂದೆ ಅದು ಉದ್ಘಾಟನೆ ಕೂಡ ಕಂಡಿತ್ತು. ಪ್ರಾರಂಭದಲ್ಲಿ ಸ್ಥಳದ ಅಭಾವವೆಂಬ ಕಾರಣಕ್ಕೆ ಜಿಮ್ ಪರಿಕರಗಳನ್ನು ಕಾರಂತರ ನಾಟ್ಯಾಲಯದಲ್ಲಿ ಇರಿಸಲಾಗಿತ್ತು. ಉದ್ಘಾಟನೆ ಅನಂತರ ಒಂದಷ್ಟು ಕಾಮಗಾರಿ ನಡೆಸಿ, ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲಿ ಬಂ ಆಗಿರುವ ಜಿಮ್ ಯಾರ ಉಪಯೋಗಕ್ಕೂ ಸಿಕ್ಕಿಲ್ಲ. ಈಗ ಮತ್ತೆ ಬೇರೆಡೆ ವರ್ಗಾವಣೆ ಆಗುವ ಸುದ್ದಿ ಹಬ್ಬಿದೆ.
ಸ್ಥಳಾಂತರಕ್ಕೆ ಪ್ರಯತ್ನ..!
ಈ ಹಿಂದೆ ಈಜುಕೊಳ ಸ್ಥಾಪಿಸುವ ಸಂದರ್ಭದಲ್ಲಿ ಆಕ್ಷೇಪ ಕೇಳಿಬಂದಿತ್ತು. ಆದರೆ ವಿರೋಧದ ಮಧ್ಯೆಯು ಸ್ಥಾಪನೆ ಆಯಿತು. ಸ್ಥಾಪನೆಯ ಉದ್ದೇಶ ಕೂಡ ಯಶಸ್ಸಿ ಕಂಡಿತ್ತು. ಪುತ್ತೂರಿನ ನೂರಾರು ಮಕ್ಕಳ ಪ್ರತಿಭೆಗೂ ವೇದಿಕೆ ಸಿಕ್ಕಿತ್ತು. ಜಿಮ್ ಮಂಜೂರಾತಿ ಆದಾಗ ಮಕ್ಕಳ ಫಿಟ್ನೆಸ್ಗೆ ಪೂರಕ ಎಂದೇ ಭಾವಿಸಲಾಗಿತ್ತು. ಕಾರಂತರಿಗೆ ಸಂಬಂಧಿಸಿ ಕಟ್ಟಡದೊಳಗಿನಿಂದ ಜಿಮ್ ಅನ್ನು ಸ್ಥಳಾಂತರಿಸಿ ಈಜುಕೊಳದ ಬಳಿಯ ಕಟ್ಟಡದ ಮೇಲಂತ್ಥಿನಲ್ಲಿ ಸ್ಥಾಪಿಸಬಹುದು ಎಂಬ ಪ್ರಸ್ತಾಪ ಕೂಡ ಇತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲು ಕೆಲವರ ಪ್ರತಿಷ್ಠೆ ಅಡ್ಡಿ ಆಗುತ್ತಿದೆ. ಸಾಂಸ್ಕೃತಿಕ ಕೇಂದ್ರಕ್ಕೆ ಜಿಮ್ ಅಗತ್ಯ ಅಲ್ಲ ಎಂಬ ಕಾರಣವೊಡ್ಡಿ ಅದರ ಸ್ಥಳಾಂತರಕ್ಕೆ ಯತ್ನಿಸಲಾಗುತ್ತಿದೆ.
ಪದಕದ ಬೇಟೆ
ಬಾಲವನದ ಈಜುಪಟುಗಳ ಸಾಧನೆಗೆ ಕಳೆದ ಮೂರು ವರ್ಷಗಳ ಅಂಕಿ-ಅಂಶ ಸಾಕ್ಷಿ. ಜಿಲ್ಲಾ ಮಟ್ಟದಲ್ಲಿ 173 ಚಿನ್ನ, 237 ಬೆಳ್ಳಿ, 213 ಕಂಚು ಸೇರಿ 623 ಪದಕ, ರಾಜ್ಯಮಟ್ಟದಲ್ಲಿ 72 ಚಿನ್ನ, 56 ಬೆಳ್ಳಿ, 44 ಕಂಚು ಸೇರಿ 172 ಪದಕ, ರಾಷ್ಟ್ರಮಟ್ಟದಲ್ಲಿ 48 ಚಿನ್ನ, 20 ಬೆಳ್ಳಿ, 2 ಕಂಚು ಸೇರಿ 70 ಪದಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ 1 ಚಿನ್ನ, 1 ಕಂಚಿನ ಪದಕ ಸೇರಿ ಒಟ್ಟು 867 ಪದಕಗಳು ಸಂದಿವೆ. ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕ ದಾಖಲೆಗಳು ಪುತ್ತೂರಿನ ಈಜುಪಟುಗಳ ಹೆಸರಿನಲ್ಲಿದೆ.
ಅಂತಾರಾಷ್ಟ್ರೀಯ ಕೀರ್ತಿ
ಪುತ್ತೂರು ಬಾಲವನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಬಾಲವನ ಈಜುಕೊಳ ಅತ್ಯಂತ ಪ್ರಮುಖ. ಇಲ್ಲಿನ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು, ಭಾರತದ ಅತಿ ಕಿರಿಯ ನಂಬರ್ ವನ್ ಸರ್ಫರ್ ಎಂಬ ಹೆಗ್ಗಳಿಕೆ ಇದೆ. ವಿಶ್ವ ಸ್ಕೂಲ್ ಗೇಮ್ ನಲ್ಲಿ ಭಾರತವನ್ನು ಪ್ರತಿನಿಸಿ ಪ್ರತಿಭೆಗಳು ಇಲ್ಲಿದ್ದಾರೆ. ವಿಶೇಷ ಅಂದರೆ ಮಹಾನಗರಗಳ ಈಜು ಕೊಳ ಬಿಟ್ಟು ಪುತ್ತೂರಿಗೆ ತರಬೇತಿಗೆ ಬರುವವರು ಇದ್ದಾರೆ. ಆಸ್ಟ್ಸ್ವಿಮ್ ಗೌರವಕ್ಕೆ ಪಾತ್ರ ಆಗಿರುವ ಈಜುಕೊಳ ದಿನೇ-ದಿನೇ ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸುತ್ತಿದೆ.