ಕಾರವಾರ: ನಗರದ ರವಿಂದ್ರನಾಥ ಕಡಲ ತೀರದಲ್ಲಿ ಆಯೋಜಿಸಲಾಗಿರುವ ಸತೀಶ ಸೈಲ್ ಕೃಷ್ಣಗಿರಿ ಕಪ್ 2018ರ ಅಖಿಲ ಭಾರತೀಯ ಎ ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿಯ 2ನೇ ದಿನ ನಿಯಮ ಉಲ್ಲಂಘನೆಯಾಗಿದ್ದರಿಂದ ಸೆಂಟ್ರಲ್ ರೈಲ್ವೆ ತಂಡ ಪಂದ್ಯ ಬಹಿಷ್ಕರಿಸಿದೆ.
ಸೆಂಟ್ರಲ್ ರೈಲ್ವೆ ತಂಡ ಪ್ರಥಮ ಸುತ್ತಿನ ಪಂದ್ಯಾವಳಿಯಲ್ಲಿ ಗೋವಾ ರಾಜ್ಯದ ತಂಡವನ್ನು ಭಾರೀ ಅಂತರದಲ್ಲಿ ಮಣಿಸಿತ್ತು. ಇದರಿಂದ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿತ್ತು. ಎರಡನೇ ದಿನ ಸೆಂಟ್ರಲ್ ರೈಲ್ವೆ ಮತ್ತು ಕಾಮತ್ ಪ್ಲಸ್ ಬೋರ್ಕರ್ ವಾರಿಯರ್ ತಂಡದ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಕಾಮತ್ ಪ್ಲಸ್ ಬೋರ್ಕರ್ ವಾರಿಯರ್ ತಂಡದಲ್ಲಿ ಎಲ್ಲರೂ ರಾಷ್ಟ್ರೀಯ ಆಟಗಾರರು ಆಟವಾಡುತ್ತಿರುವ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಸೆಂಟ್ರಲ್ ರೈಲ್ವೆ ತಂಡದ ಆಟಗಾರರು ಪಂದ್ಯಾವಳಿ ಬಹಿಷ್ಕರಿಸಿದರು.
ಅಖಿಲ ಭಾರತೀಯ ಕಬಡ್ಡಿ ಪೆಡರೇಶನ್ ನಿಯಮದಂತೆ ನಗರದಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ತಂಡದಲ್ಲಿ ಯಾವುದೇ ರಾಷ್ಟ್ರ ಮಟ್ಟದ ಆಟಗಾರರು ಪಾಲ್ಗೊಳ್ಳುವುದಾದರೇ ಎದುರಾಳಿ ತಂಡಕ್ಕೆ ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಅಲ್ಲದೆ ಸ್ಥಳೀಯ ತಂಡದ ಹೆಸರಿನಲ್ಲಿ ಹೊರ ರಾಜ್ಯದ ಆಟಗಾರರನ್ನು ಆಡಿಸಬಾರದು ಎನ್ನುವ ನಿಯಮವಿದೆ. ಅಲ್ಲದೆ ಕಾಮತ್ ಪ್ಲಸ್ ಬೋರ್ಕರ್ ವಾರಿಯರ್ ತಂಡ ರಾಷ್ಟ್ರೀಯ ಆಟಗಾರರನ್ನು ಆಡಿಸುತ್ತಿದ್ದಾರೆ ಎನ್ನುವುದು ಸೆಂಟ್ರಲ್ ರೈಲ್ವೆ ತಂಡದ ವಾದವಾಗಿತ್ತು.