ದುಬೈ(ನ.05) : ಐಸಿಸಿ ಟಿ20 ವಿಶ್ವಕಪ್ನಲ್ಲಿ ನಾವು ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ನ್ಯೂಜಿಲೆಂಡ್ ತಂಡವನ್ನು ಆಫ್ಘಾನಿಸ್ತಾನ ಸೋಲಿಸಬೇಕು. ನಮ್ಮ ಭವಿಷ್ಯ ಆಫ್ಘನ್ ಕೈಯಲ್ಲಿದೆ ಎಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಆಫ್ಘನ್ ಗೆಲ್ಲಬೇಕು ಎಂದರೆ ಆಫ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ರನ್ನು ಆಡಿಸಬೇಕು. ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬೇಕಿದ್ದರೆ ನಾವು ನಮ್ಮ ತಂಡದ ಫಿಸಿಯೋ ಕಳುಹಿಸಿ ಚಿಕಿತ್ಸೆ ಕೊಡಿಸುತ್ತೇವೆ. ಆಫ್ಘನ್ ಗೆಲುವಿಗೆ ಹಾರೈಸುವುದೊಂದೇ ನಾವು ಮಾಡಲು ಸಾಧ್ಯವಿರುವ ಕೆಲಸ’ ಎಂದಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ, ಮೂರನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು 66 ರನ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಂದು ವೇಳೆ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ದ ಗೆಲುವು ಸಾಧಿಸಿದರೆ, ಇದೇ ವೇಳೆ ಟೀಂ ಇಂಡಿಯಾ ತನ್ನ ಪಾಲಿನ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ದ ದೊಡ್ಡ ಅಂತರದ ಗೆಲುವು ಸಾಧಿಸಿದರೆ, ಭಾರತ ಸೆಮೀಸ್ಗೇರಲಿದೆ.
ನವೆಂಬರ್ 07ರಂದು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ಕಿವೀಸ್ ತಂಡವನ್ನು ಮಣಿಸಲಿ ಎಂದು ಕೋಟ್ಯಾಂತರ ಭಾರತೀಯರು ಪ್ರಾರ್ಥಿಸಲಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.