ಮುಂಬಯಿ: ಕೇವಲ ಏಕದಿನ ಹಾಗೂ ಟಿ-20 ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಹಲವಾರು ಮಂದಿ ಈಗಾಗಲೇ ಟೀಕೆ ಮಾಡುತ್ತಿದ್ದಾರೆ. ಆದರೆ ಟೀಕೆಗಳು ಏನೇ ಇದ್ದರೂ ದೋನಿ ಮಾತ್ರ 2019ರ ವಿಶ್ವಕಪ್ ತನಕ ಆಡುವುದು ಗ್ಯಾರಂಟಿಯಾಗಿದೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ತನಕ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷ ಎಂಎಸ್ ಕೆ ಪ್ರಸಾದ್ ದೃಢಪಡಿಸಿದರು.
ಯುವ ಆಟಗಾರರಿಗೆ ಕೆಲವು ಅವಕಾಶಗಳನ್ನು ನೀಡಲಾಗಿದೆ. ಆದರೆ ಅವರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ ಎಂದು ಹೇಳಿರುವ ಪ್ರಸಾದ್, ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆ ಖಚಿತಪಡಿಸಿದ್ದಾರೆ.
ಭಾರತ ಎ ತಂಡದಲ್ಲಿ ಕೆಲವು ವಿಕೆಟ್ ಕೀಪರ್ ಗಳನ್ನು ಬೆಳಸುತ್ತಿದ್ದೇವೆ. ಆದರೆ ಮುಂದಿನ ವಿಶ್ವಕಪ್ ತನಕ ಧೋನಿ ವಿಕೆಟ್ ಕೀಪರ್ ಆಗಿರುತ್ತಾರೆ ಎನ್ನುವುದನ್ನು ನಾವು ನಿರ್ಧರಿಸಿದ್ದೇವೆ. ಈ ಹಂತದಲ್ಲಿ ನಾವು ಹೊಸ ವಿಕೆಟ್ ಕೀಪರ್ ನ್ನು ಬೆಳೆಸುತ್ತೇವೆ ಎಂದು ಪ್ರಸಾದ್ ತಿಳಿಸಿದರು.
ಧೋನಿಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ವಿಶ್ವ ಕ್ರಿಕೆಟಿನಲ್ಲಿ ಈಗ ಅವರಂತಹ ವಿಕೆಟ್ ಕೀಪರ್ ಇಲ್ಲ ಎಂದರು.