ಬೆಂಗಳೂರು: ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿಯ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಗಳಿಸಿದರು. ಇದು ಅವರ ಚೊಚ್ಚಲ ಶತಕ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಬಂದ ಎರಡನೇ ಶತಕ ಅದು. ಸಂಜು ಸ್ಯಾಮ್ಸನ್ ಕೂಡ ಶತಕ ಭಾರಿಸಿದ್ಧಾರೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ಶತಕ ಭಾರಿಸಿದ ಇಬ್ಬರೂ ಬ್ಯಾಟ್ಸ್ಮನ್ಗಳು ಮಲಯಾಳಿಗಳು ಎಂದು ಹರ್ಷೋದ್ಘಾರ ಮಾಡಿದ್ದಾರೆ. ಆದರೆ, ಇದಕ್ಕೆ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ದೊಡ್ಡ ಗಣೇಶ್ ಅವರು ಟ್ವೀಟ್ ಮೂಲಕವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ಧಾರೆ.
‘ಬಹಳ ಕಾಲದಿಂದ ಕೇರಳ ರಾಜ್ಯವನ್ನು ಕ್ರಿಕೆಟ್ ಲೋಕದ ಕೂಸು ಎಂದು ಪರಿಗಣಿಸಲಾಗುತ್ತಿತ್ತು. ಈಗ ಈ ಬಾರಿಯ ಐಪಿಎಲ್ನಲ್ಲಿ ಬಂದ ಎರಡೂ ಶತಕಗಳನ್ನ ಮಲಯಾಳಿಗಳೇ ಹೊಡೆದಿರುವುದು ಸೋಜಿಗದ ಸಂಗತಿ.ಈ ಬಾರಿಯ ಐಪಿಎಲ್ನಲ್ಲಿ ಶತಕ ಭಾರಿಸಿದ ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ ಪಡಿಕ್ಕಲ್ಗೆ ಅಭಿನಂದನೆಗಳು’ ಎಂದು ತಿರುವನಂತಪುರಂ ಕ್ಷೇತ್ರದ ಸಂಸದರಾದ ಶಶಿ ತರೂರ್ ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ದೊಡ್ಡ ಗಣೇಶ್ ‘2016ರಲ್ಲಿ ಕರುಣ್ ನಾಯರ್ ತ್ರಿಶತಕ ಭಾರಿಸಿದಾಗ ಬಹಳ ಜನರು ಇವ ನಮ್ಮವ ಎಂದು ಹೇಳಿಕೊಂಡಿದ್ದರು. ಅದಾದ ಬಳಿಕ ಆತ ಸ್ಥಾನ ಕಳೆದುಕೊಂಡಾಗ ಇದೇ ಜನರು ಆತನನ್ನು ತಿರಸ್ಕರಿಸಿದರು. ಈಗ ದೇವದತ್ ವಿಚಾರದಲ್ಲಿಯೂ ಅದೇ ರೀತಿ ಆಗುತ್ತಿದೆ. ಅವರು ಮಲಯಾಳಿಗಳೆಂದು ನಾನು ಒಪ್ಪುತ್ತೇನೆ. ಆದರೆ, ಕರುಣ್ ಮತ್ತು ದೇವದತ್ ಅವರುಗಳು ಕ್ರಿಕೆಟಿಗರಾಗಿ ಬೆಳವಣಿಗೆ ಸಾಧಿಸುವುದರ ಹಿಂದೆ ಕೇರಳದ ಯಾವ ಪಾತ್ರವೂ ಇಲ್ಲ. ಅವರು ಕರ್ನಾಟಕದ ಹುಡುಗರು’ ಎಂದು ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.