ಮುಂಬೈ, ಎ.12 : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಕ್ಯಾಚ್ ಪಡೆಯಲಿಲ್ಲ ಎಂಬ ಕಾರಣಕ್ಕೆ ಹಿರಿಯ ಬೌಲರ್ ಮುಹಮ್ಮದ್ ಶಮಿ ಅವರ ಮೇಲೆ ರೇಗಾಡಿದ್ದಾರೆ. ಹಿರಿಯ ಆಟಗಾರನೊಂದಿಗೆ ಪಾಂಡ್ಯ ಅವರ ವರ್ತನೆಯನ್ನು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಹಲವು ಬಾರಿ ಬೇಸರವನ್ನು ಹೊರಹಾಕಿದ್ದು,163 ರನ್ ಚೇಸಿಂಗ್ ಮಾಡಿದ್ದ ಹೈದರಾಬಾದ್ ತಂಡವು 5 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
ಇನಿಂಗ್ಸ್ ನ 13ನೇ ಓವರ್ ನಲ್ಲಿ ಗುಜರಾತ್ ನಾಯಕ ಪಾಂಡ್ಯ ತನ್ನ ಎರಡನೇ ಸ್ಪೆಲ್ ಎಸೆಯಲು ವಾಪಸಾದರು. ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಓವರ್ ನ 2ನೇ ಹಾಗೂ 3ನೇ ಎಸೆತದಲ್ಲಿ ಸತತ ಸಿಕ್ಸರ್ ಸಿಡಿಸಿದರು. ಓವರ್ ನ ಕೊನೆಯ ಎಸೆತದಲ್ಲಿ ಗುಜರಾತ್ ತಂಡಕ್ಕೆ ವಿಲಿಯಮ್ಸನ್ ಜೊತೆಗಾರ ರಾಹುಲ್ ತ್ರಿಪಾಠಿಯವರನ್ನು ಔಟ್ ಮಾಡುವ ಅವಕಾಶ ಲಭಿಸಿತ್ತು. ತ್ರಿಪಾಠಿ ನೀಡಿದ ಕ್ಯಾಚ್ ಪಡೆಯಲು ಮುಹಮ್ಮದ್ ಶಮಿ ವಿಫಲರಾದರು. ಶಮಿ ಚೆಂಡನ್ನು ಕ್ಯಾಚ್ ಪಡೆಯುವ ರಿಸ್ಕ್ ಗೆ ಹೋಗದೆ ಬೌಂಡರಿ ಗೆರೆ ದಾಟುವುದನ್ನು ತಪ್ಪಿಸಲು ಯತ್ನಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಪಾಂಡ್ಯ ಅವರು ಶಮಿ ಮೇಲೆ ರೇಗಾಡಿದರು.
‘ಹಾರ್ದಿಕ್ ಅವರೇ ನೀವು ಭಯಾನಕ ನಾಯಕ. ಶಮಿಯವರಂತಹ ಹಿರಿಯ ಆಟಗಾರರೊಂದಿಗೆ ಆ ರೀತಿ ಮಾತನಾಡುವುದನ್ನು ನಿಲ್ಲಿಸಿ” ಎಂದು ಓರ್ವ ಕ್ರಿಕೆಟ್ ಅಭಿಮಾನಿ ಟ್ವೀಟಿಸಿದ್ದಾರೆ.
‘ಪಾಂಡ್ಯ ಅವರು ಶಮಿಯ ಮೇಲೆ ಕೂಗಾಡಿದ್ದು ಉತ್ತಮ ನಡತೆಯಲ್ಲ. ಶಮಿ ಅವರು ಭಾರತ ತಂಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಶಮಿ ಸಾಧಿಸಿದ ಅರ್ಧದಷ್ಟನ್ನು ಪಾಂಡ್ಯ ಸಾಧಿಸಿಲ್ಲ”ಎಂದು ಇನ್ನೋರ್ವ ಕ್ರಿಕೆಟ್ ಅಭಿಮಾನಿ ಹೇಳಿದ್ದಾರೆ.
‘ತಂಡದ ಸದಸ್ಯರೊಂದಿಗೆ ಅದರಲ್ಲೂ ಹಿರಿಯ ಆಟಗಾರರೊಂದಿಗೆ ಹೇಗೆ ಮಾತನಾಡಬೇಕೆಂದು ಗೊತ್ತಿರದ ಹಾರ್ದಿಕ್ ಪಾಂಡ್ಯ ಯಾವುದೇ ತಂಡದ ನಾಯಕನಾಗಲು ಅನರ್ಹ. ನೀವು ಎಲ್ಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಕ್ರಿಕೆಟ್ ಜಂಟಲ್ ಮ್ಯಾನ್ ಗೇಮ್ ಎನ್ನುವುದನ್ನು ಗಮನಿಸಿ” ಎಂದು ಅಹ್ಮದ್ ಎಂಬುವವರು ಟ್ವೀಟಿಸಿದ್ದಾರೆ.
‘ರಿಸ್ಕಿ ಕ್ಯಾಚ್ ಪಡೆಯದೆ ಬೌಂಡರಿ ಉಳಿಸಲು ಆದ್ಯತೆ ನೀಡಿದ ಹಿರಿಯ ಆಟಗಾರ ಹಾಗೂ ಭಾರತದ ಲೆಜೆಂಡ್ ಮುಹಮ್ಮದ್ ಶಮಿ ಮೇಲೆ ಹಾರ್ದಿಕ್ ಪಾಂಡ್ಯ ಅವಮಾನಿಸಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ”ಎಂದು ಇನ್ನೊಬ್ಬ ಕ್ರಿಕೆಟ್ ಅಭಿಮಾನಿ ಟ್ವೀಟಿಸಿದ್ದರು.