ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗದ ಬೌಲರ್ ಹರ್ಷಲ್ ಪಟೇಲ್ ತನ್ನ ಕುಟುಂಬ ಸದಸ್ಯರ ಸಾವಿನ ಸುದ್ದಿ ತಿಳಿದು ಐಪಿಎಲ್ ಬಯೋ ಬಬಲ್ ತೊರೆದಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಕುಟುಂಬದಲ್ಲಿ ಸಂಭವಿಸಿದ ದುರಂತದ ಬಗ್ಗೆ ತಿಳಿದ ನಂತರ ಹರ್ಷಲ್ ಬಯೋ ಬಬಲ್ ನಿಂದ ನಿರ್ಗಮಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ದುರದೃಷ್ಟವಶಾತ್, ಹರ್ಷಲ್ ಅವರ ಕುಟುಂಬದಲ್ಲಿನ ಸಾವಿನ ಕಾರಣದಿಂದ ಬಯೋ ಬಬಲ್ ನ್ನು ತೊರೆಯಬೇಕಾಯಿತು. ಅವರು ಏಪ್ರಿಲ್ 12 ರಂದು ಸಿಎಸ್ ಕೆ ವಿರುದ್ಧದ ಮುಂದಿನ ಪಂದ್ಯಕ್ಕೆ ಮೊದಲು ಬಬಲ್ ಅನ್ನು ಮತ್ತೆ ಸೇರಿಕೊಳ್ಳುತ್ತಾರೆ” ಎಂದು ಐಪಿಎಲ್ ಮೂಲಗಳು ತಿಳಿಸಿವೆ.
ಕಳೆದೆರಡು ಸೀಸನ್ ನಿಂದ ಹರ್ಷಲ್ ಪಟೇಲ್ ಅವರು ಆರ್ ಸಿಬಿ ತಂಡದ ಪರ ಸ್ಟಾರ್ ಆಟಗಾರರಾಗಿದ್ದಾರೆ. ಮುಂಬೈ ವಿರುದ್ಧದ ಶನಿವಾರದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಎರಡು ಪ್ರಮುಖ ವಿಕೆಟ್ ಕಬಳಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ ಸಿಬಿ ಮುಂದಿನ ಪಂದ್ಯವನ್ನು ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.