ಮಡಿಕೇರಿ: ಏಪ್ರಿಲ್ ತಿಂಗಳು ಬಂತೆಂದರೆ ಕೊಡಗಿನಲ್ಲಿ ಕ್ರೀಡೆಗಳ ಭರಾಟೆ ಆರಂಭವಾದಂತೆಯೇ. ವಿವಿಧ ಸಮುದಾಯಗಳ, ಸಂಘಟನೆಗಳ ಪಂದ್ಯಾವಳಿಗಳು ಅಲ್ಲಲ್ಲಿ ನಡೆಯುತ್ತವೆ. ಈಗಾಗಲೇ ಕೊಡವ ಹಾಕಿ ಹಬ್ಬ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳನ್ನು ಸೆಳೆದಿದೆ. ಇದರ ನಡುವೆ ಕ್ರಿಕೆಟ್ ಪಂದ್ಯಾವಳಿಯೂ ಗಮನಸೆಳೆಯುತ್ತಿದೆ.
ಈ ಬಾರಿ ಕ್ರಿಕೆಟ್ ಪಂದ್ಯಾವಳಿ ಅಳಮೇಂಗಡ ಕುಟುಂಬದ ಸಾರಥ್ಯದಲ್ಲಿ ದಕ್ಷಿಣ ಕೊಡಗಿನ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 24 ರಿಂದ ಆರಂಭವಾಗಲಿದ್ದು ಸುಮಾರು 24 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಅಳಮೇಂಗಡ ಕ್ರಿಕೆಟ್ ಹಬ್ಬ ಸಮಿತಿ ಸರ್ವ ವಿಧದಲ್ಲೂ ಸಜ್ಜಾಗುತ್ತಿದೆ. ಈಗಾಗಲೇ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಕೂಲವಾಗುವಂತೆ ಮೈದಾನವನ್ನು ಅಭಿವೃದ್ಧಿಗೊಳಿಸುವ ಕಾರ್ಯವೂ ನಡೆಯುತ್ತಿದೆ. ಈ ಬಾರಿ ನಡೆಯುವ ಮೈದಾನದಲ್ಲೇ ಹಿಂದೆ ಬಲ್ಲಿಮಾಡ, ಕಾಂಡೇರ, ಅಡ್ಡೇಂಗಡ ಹಾಗೂ ಕೊಕ್ಕೇಂಗಡ ಕುಟುಂಬಗಳು ಪಂದ್ಯಾವಳಿಯನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
ಪಂದ್ಯವು 8 ಓವರ್ ಗಳದ್ದಾಗಿದ್ದು, ಪ್ರತಿ ತಂಡಕ್ಕೂ ಉತ್ತಮ ಆಟ ಆಡಲು ಅವಕಾಶ ನೀಡಲಾಗುತ್ತದೆ. ಪಂದ್ಯಾವಳಿಗೆ ಸುಮಾರು 20 ಲಕ್ಷ ರೂ. ಖರ್ಚಾಗುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ರೂ. 5 ಲಕ್ಷ ಅನುದಾನ ಘೊಷಣೆ ಮಾಡಿದ್ದು, ಸಂಸದರಿಂದಲೂ ಅನುದಾನದ ನಿರೀಕ್ಷೆಯಲ್ಲಿ ಪಂದ್ಯಾವಳಿಯ ಆಯೋಜಕರು ಇದ್ದಾರೆ. ಈ ಬಾರಿ ಪಂದ್ಯಾವಳಿ ನಡೆಸುವುದರೊಂದಿಗೆ ಮೈದಾನದ ಸುತ್ತ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಮೈದಾನದ ಅಭಿವೃದ್ಧಿಗೂ ಪಂದ್ಯಾವಳಿಯ ಸಾರಥ್ಯ ವಹಿಸಿರುವ ಅಳಮೇಂಗಡ ಕುಟುಂಬ ಮುಂದಾಗಿದೆ. ತಂಡಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಕೊಡಗಿನಾದ್ಯಂತ 23 ಕಡೆಗಳಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಪಂದ್ಯಾವಳಿಯಲ್ಲಿ ಸುಮಾರು 250 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ಆಯೋಜಕರಿದ್ದಾರೆ. ಅಲ್ಲದೆ ಯಾವುದೇ ಗೊಂದಲ, ತೊಂದರೆಯಾಗದಂತೆ ಸುಗಮವಾಗಿ ಪಂದ್ಯಾವಳಿ ನಡೆಯಲು ಬೇಕಾದಂತಹ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಬೇಸಿಗೆಯ ದಿನಗಳನ್ನು ವ್ಯರ್ಥವಾಗಿ ಕಳೆಯದೆ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದೊಂದಿಗೆ, ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಕ್ರಿಕೆಟ್ ಪಂದ್ಯಾವಳಿ(ಹಬ್ಬ) ಆಯೋಜಿಸುತ್ತಿದ್ದು ಇದನ್ನು ಸದುಪಯೋಗಿಸಿಕೊಳ್ಳಬೇಕು. ಇದರೊಂದಿಗೆ ಕ್ರೀಡಾಭಿಮಾನಿಗಳು ಪಾಲ್ಗೊಂಡು ಪ್ರೋತ್ಸಾಹಿಸಬೇಕು ಎಂಬುದು ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಅಳಮೇಂಗಡ ಕುಟುಂಬದ ಬಯಕೆಯಾಗಿದೆ. ಪಂದ್ಯಾವಳಿಯು ಎರಡು ಮೈದಾನಗಳಲ್ಲಿ ನಡೆಯಲಿದ್ದು, ಮುಂದೂಡಲ್ಪಟ್ಟ ಪಂದ್ಯಗಳನ್ನು ಎರಡನೆ ಮೈದಾನದಲ್ಲಿ ನಡೆಸಲಾಗುವುದು. ಅಲ್ಲದೆ ದೂರದಿಂದ ಬಂದ ತಂಡಗಳಿಗೆ ಮುಂದೂಡಲ್ಪಟ್ಟ ಪಂದ್ಯದೊಂದಿಗೆ ಮತ್ತೊಂದು ಸುತ್ತಿನ ಪಂದ್ಯಗಳನ್ನು ಅದೇ ದಿನ ನಡೆಸಲು ತೀರ್ಮಾನಿಸಲಾಗಿದೆ. ಪಂದ್ಯಾವಳಿ ಆರಂಭಕ್ಕೆ ಇನ್ನೂ ಒಂದು ತಿಂಗಳಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಭರದಿಂದ ಸಾಗುತ್ತಿದೆ.