ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಆರು ರನ್ ಗಳಿಂದ ಆರ್ ಸಿಬಿ ತವರಿನಲ್ಲಿ ಸೋಲುಂಡಿರುವುದಕ್ಕೆ ಅಂಪಾಯರ್ ಮಾಡಿರುವ ತಪ್ಪು ಎಂದು ತಿಳಿದುಬಂದಿದೆ.
187 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಆರ್ ಸಿಬಿ ಐದು ವಿಕೆಟ್ ಕಳಕೊಂಡು 181 ರನ್ ಮಾಡಿ ಸೋಲುಂಡಿತು. ಆದರೆ ಕೊನೆಯ ಎಸೆತ ನೋ ಬಾಲ್ ಆಗಿದ್ದರೂ ಅಂಪಾಯರ್ ಅದನ್ನು ಗಮನಿಸದೆ ಇರುವುದು ಈಗ ಟೀಕೆಗೆ ಗುರಿಯಾಗಿದೆ.
ಕೊಹ್ಲಿ 46 ರನ್ ಮತ್ತು ಡಿವಿಲಿಯರ್ಸ್ ಅದ್ಭುತವಾಗಿ ಆಡಿ 41 ಎಸೆತಗಳಲ್ಲಿ 70 ರನ್ ಸಿಡಿಸಿದರು. ಆದರೆ ಜಸ್ಪೀತ್ ಬುಮ್ರಾ 20 ರನ್ ನೀಡಿ ಮೂರು ವಿಕೆಟ್ ಉರುಳಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆದರೆ ಅಂಪಾಯರ್ ತಪ್ಪು ಸೋಲಿಗೆ ಕಾರಣ ಎಂದು ಆರ್ ಸಿಬಿ ಹೇಳಿದೆ. ಇದಕ್ಕೆ ಮೊದಲು ರಾಜಸ್ಥಾನ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲೂ ಅಧಿಕಾರಿಗಳು ತಪ್ಪು ಮಾಡಿದ್ದರು ಎಂದು ಬಿಸಿಸಿಐ ಹೇಳಿತ್ತು.
ನಾವು ಇಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಐಪಿಎಲ್ ಎನ್ನುವುದು ಒಂದು ಉತ್ತಮ ದರ್ಜೆಯ ಕ್ರಿಕೆಟ್. ತುಂಬಾ ರೋಚಕ ಪಂದ್ಯಗಳಲ್ಲಿ ಅಂಪಾಯರ್ ಗಳು ಕಣ್ಣು ಬಿಟ್ಟಿರಬೇಕು ಎಂದು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.