ಕೋವಿಡ್19 ಸಂಕ್ರಮಣದ ಪರಿಹಾರ ಕಾರ್ಯದಲ್ಲಿ ಯಾವುದೇ ಪ್ರಚಾರ ವಿಲ್ಲದೆ ಮೌನವಾಗಿ ತನ್ನನ್ನು ಸಕ್ರಿಯವಾಗಿ ಸಂಸ್ಥೆಯು ತೊಡಗಿಸಿಕೊಂಡಿದೆ. ಇದರ ಒಂದು ಭಾಗವಾಗಿ ಪ್ರಸ್ತುತ ಕರ್ನಾಟಕದ ಕೋವಿಡ್ 19 ಸಂತ್ರಸ್ತರ ನೆರವಿಗಾಗಿ ಸಂಸ್ಥೆಯ ವತಿಯಿಂದ ರೂಪಾಯಿ ಒಂದು ಲಕ್ಷವನ್ನು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರಿಗೆ ಇತ್ತೀಚಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಸಂಘದ ಪರವಾಗಿ ಸಂಸ್ಥೆಯ ಪೂರ್ವ ಅಧ್ಯಕ್ಷರೂ ಹಾಲಿ ಸಲಹೆಗಾರರೂ ಆದ ಶ್ರೀ ಸುಗಂಧ ರಾಜ್ ಬೇಕಲ್ ಮತ್ತು ಊರಲ್ಲಿರುವ ಸಂಸ್ಥೆಯ ಇತರ ಹಿತೈಷಿಗಳನ್ನೊಳಗೊಂಡ ನಿಯೋಗವು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮೊತ್ತವನ್ನು ಹಸ್ತಾಂತರಿಸಿತು. ಮಾನ್ಯ ಜಿಲ್ಲಾಧಿಕಾರಿಯವರು ಕರ್ನಾಟಕ ಸಂಘದ ಧೀರ್ಘಕಾಲದ ಜನಹಿತ ಸೇವಾ ಕಾರ್ಯವನ್ನು ಶ್ಲಾಘಿಸುತ್ತಾ ಕೋವಿಡ್19 ಸಂತ್ರಸ್ತರ ನೆರವಿಗೆ ಸಂಸ್ಥೆಯು ಅರ್ಪಿಸಿದ ದೇಣಿಗೆಯನ್ನು ಸ್ವೀಕರಿಸುತ್ತಾ ಕರ್ನಾಟಕ ಸರಕಾರದ ಪರವಾಗಿ ಧನ್ಯವಾದವನ್ನು ಹೇಳಿದರು ಹಾಗೂ ಸಾದರ ಸ್ವೀಕಾರದೊಂದಿಗೆ ಸರಕಾರದ ಪರವಾಗಿ ಪ್ರಶಂಸಾ ಪತ್ರವನ್ನು ನೀಡಿದರು. ಕರ್ನಾಟಕ ಸಂಘ ಶಾರ್ಜಾದ ಪರವಾಗಿ ಜಿಲ್ಲಾಧಿಕಾರಿಯವರಿಗೆ ಧನ್ಯವಾದ ಸಮರ್ಪಿಸಿದ ಶ್ರೀ ಸುಗಂಧ ರಾಜ ಬೇಕಲ್ ರವರು, ಕನ್ನಡ ನಾಡಿನ ಜನತೆಯ ಸೇವೆಯನ್ನೇ ತನ್ನ ಮುಖ್ಯ ಗುರಿಯಾಗರಿಸಿಕೊಂಡು ಕಳೆದ 20 ವರ್ಷಗಳಿಂದ ಸಾರ್ಥಕವಾದ ಬಹುಮುಖೀ ಜನಪರ ಸೇವೆಯನ್ನು ಗೈಯ್ಯುತ್ತಿರುವ ಕರ್ನಾಟಕ ಸಂಘ ಶಾರ್ಜಾ ಇನ್ನು ಮುಂದೆಯೂ ಕನ್ನಡ ನಾಡಿನ ಒಳಿತಿಗಾಗಿ ತನ್ನ ತನ್ನ ಸೇವಾ ಕೈಂಕರ್ಯವನ್ನು ಮುಂದುವರಿಸಲಿದೆ ಎಂದು ಹೇಳಿದರು.