ಮುಂಬಯಿ: ವೆಸ್ಟರ್ನ್ ಇಂಡಿಯಾ ಪೂಜಾ ಸಮಿತಿಯು ತನ್ನ 73ನೇ ವರ್ಷ ಪೂರೈಸಿರುವುದು ತುಂಬಾ ಹೆಮ್ಮೆಯ ವಿಚಾರ. ನಮ್ಮ ಹಿರಿಯರು ಸ್ವಾತಂತ್ರ್ಯಪೂರ್ವದಲ್ಲೇ ಬಡತನದಲ್ಲೂ ಈ ಸಮಿತಿಯನ್ನು ಸಂಸ್ಕೃತಿಯ ಉಳಿವಿಗಾಗಿ ಕಟ್ಟಿದ್ದಾರೆ. ಶನಿದೇವರ ಆಶೀರ್ವಾದ ಪಡೆದು ನಾವೆಲ್ಲರೂ ಸಮಿತಿಯನ್ನು ಮಂದಿರ ನಿರ್ಮಾಣ ಕಾರ್ಯಕ್ಕೆ ತೊಡಗಿಸಿಕೊಳ್ಳಬೇಕು ಎಂದು ಚಿತ್ರನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಮಾಜಸೇವಕ ರಾಜಶೇಖರ್ ಕೋಟ್ಯಾನ್ ಕರೆ ನೀಡಿದರು.
ವೆಸ್ಟರ್ನ್ ಇಂಡಿಯಾ ಪೂಜಾ ಸಮಿತಿ ಡಿ.16ರಂದು ಆಯೋಜಿಸಿದ್ದ 73ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇದೇ ವೇಳೆ ಸಮಿತಿಯ ಹಿರಿಯ ಸದಸ್ಯ ಚಂದ್ರಶೇಖರ ವಿ. ಪೂಜಾರಿ, ಸಮಿತಿಯ ಮಾಜಿ ಭುವಾಜಿ ಬಾಬು ಪೂಜಾರಿ, ನೆರೂಲ್ ಶನೀಶ್ವರ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ, ರಂಗಕರ್ಮಿ ವಿ.ಕೆ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಉದ್ಯಮಿ, ಯಕ್ಷಗಾನದ ಹಿರಿಯ ಅರ್ಥದಾರಿ ಕೆ.ಕೆ. ಶೆಟ್ಟಿ, ಉದ್ಯಮಿ ಕರ್ನಿರೆ ಗಂಗಾಧರ ಎನ್. ಅಮೀನ್, ಜೂನಿಟಾ ಬಿಲ್ಡರ್ ನಿರ್ದೇಶಕ ಗಿಲ್ಬರ್ಟ್ ಡಿಸೋಜಾ, ದಹಿಸರ್ ಕೊಂಕಣಿಪಾಡು ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ, ಬಿಲ್ಲವ ಛೇಂಬರ್ ಆಪ್ ಕಾಮರ್ಸ್ ನ ಅಧ್ಯಕ್ಷ ಎನ್. ಟಿ. ಪೂಜಾರಿ, ನೆರೂಲ್ ಶನಿ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಉಪಸ್ಥಿತರಿದ್ದರು.