ಮೈಸೂರು: ಮುಡಾ ಇದೀಗ ಎಂಡಿಎ ಹಗರಣಗಳು ಸಾಕಷ್ಟು ಬಯಲಿಗೆ ಬಂದಿದೆ. ಹಗರಣಗಳಿಂದ ಬೇಸತ್ತ ಸರ್ಕಾರ ಮುಡಾ ಗೆ ಮೇಜರ್ ಸರ್ಜರಿ ಮಾಡಿ ಮೈಸೂರು ಅಭಿವೃದ್ದಿ ಪ್ರಾಧಿಕಾರ ಎಂದು ಬದಲಿಸಿದೆ. ಹೀಗಿದ್ದರೂ ಇನ್ನೂ ಅಧಿಕಾರಿಗಳಾಗಲಿ ಕಾನೂನು ಶಾಖೆಯಾಗಲಿ ಎಚ್ಚೆತ್ತುಕೊಂಡಿಲ್ಲ. ಭ್ರಷ್ಟ ಅಧಿಕಾರಿಯ ಪರ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದೆ.
ಅಮಾನತಿನಲ್ಲಿರುವ ವಿಶೇಷ ತಹಸೀಲ್ದಾರ್ ಪರ ನಿಂತ ಪ್ರಾಧಿಕಾರಕ್ಕೆ ಸರ್ಕಾರ ಚಾಟಿ ಬೀಸಿ ಬಿಸಿ ಮುಟ್ಟಿಸಿದೆ. ಭ್ರಷ್ಟ ಅಧಿಕಾರಿ ನಡೆಸಿದ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ವರದಿ ಸಲ್ಲಿಸುವಂತೆ ಹಾಗೂ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಪ್ರಾಧಿಕಾರದಿಂದ ಖಡಕ್ ವಾರ್ನಿಂಗ್ ಪತ್ರ ಬಂದಿದ್ದರೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಭ್ರಷ್ಟ ಅಧಿಕಾರಿಯ ಅಕ್ರಮವನ್ನ ಮುಚ್ಚಿಡಲು ಹವಣಿಸುತ್ತಿದೆ.

ಮೈಸೂರು ಅಭಿವೃದ್ದಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಧ್ಯ ಅಮಾನತಿನಲ್ಲಿದ್ದಾರೆ. ಕಾರಣ ಗೋಕುಲಂ ಬಡಾವಣೆಯ 3 ನೇ ಹಂತದ ಸಂಖ್ಯೆ 867 ಯ 30*40 ಅಡಿ ವಿಸ್ತೀರ್ಣದ ಮಾದರಿ ಮನೆಗೆ ಸಂಬಂಧಿಸಿದಂತೆ ಪೌತಿಖಾತೆ ವರ್ಗಾವಣೆ ಹಾಗೂ ತಿದ್ದುಪಡಿ ಕ್ರಯಪತ್ರ ವಿತರಣೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನಲೆ ಕಳೆದ ವರ್ಷ ಜೂನ್ ನಲ್ಲಿ ಇಲಾಖಾ ವಿಚಾರಣೆ ಬಾಕಿ ಇರುವಂತೆ ಅಮಾನತು ಆದೇಶವಾಗಿದೆ.
ಇವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ ಆದ್ರೆ ಇದ್ಯಾವುದನ್ನೂ ಲೆಕ್ಕಿಸದ ಪ್ರಾಧಿಕಾರವಾಗಲಿ ಕಾನೂನು ಶಾಖೆಯಾಗಲಿ ರಾಜಶೇಖರ್ ಪರ ನಿಂತು ಬಿಟ್ಟಿದೆ. ಅವರ ಅಕ್ರಮಗಳನ್ನ ಮುಚ್ಚಿಡುವು ಎಲ್ಲಾ ಕಸರತ್ತುಗಳನ್ನೂ ನಡೆಸುತ್ತಿದೆ. ಇದೀಗ ನಗರಾಭಿವೃದ್ದಿ ಪ್ರಾಧಿಕಾರಿಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ ಶಿಸ್ತುಕ್ರಮ ಕೈಗೊಂಡ ಬಗ್ಗೆ ಹಾಗೂ ಆರೋಪಿತ ಅಧಿಕಾರಿ ವಿರುದ್ದ ದೋಷಾರೋಪಣ ಪಟ್ಟಿ ಮತ್ತು ಧೃಢೀಕೃತ ದಾಖಲೆಗಳನ್ನ ಒದಗಿಸುವಂತೆ ಮೈಸೂರು ಅಭಿವೃದ್ದಿ ಪ್ರಾಧಿಕಾರಕ್ಕೆ ತುರ್ತು ಪತ್ರ ಬರೆದು ನಿರ್ದೇಶನ ನೀಡಿದೆ.
ಮೂರು ದಿನಗಳ ಒಳಗೆ ದಾಖಲೆಗಳನ್ನ ಸಲ್ಲಿಸುವಂತೆ ಸೂಚನೆ ನೀಡಿದೆ. ಪತ್ರ ರವಾನೆಯಾಗಿ ಹಲವಾರು ದಿನಗಳು ಉರುಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೊಂದು ತುರ್ತು ಪತ್ರವೂ(ಸಂಖ್ಯೆ ನ.ಅ.ಪ್ರಾ/ನಗ್ರಾಯೋ/ಅ(2)/ಮೈಅಪ್ರಾ/2026) ಎಂಡಿಎ ಆಯುಕ್ತರಿಗೆ ರವಾನೆಯಾಗಿದೆ. ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಕರಡು ದೋಷಾರೋಪಣೆ ಪಟ್ಟಿ 1-4 ಹಾಗೂ ದಾಖಲೆಗಳನ್ನ ವಿಳಂಬ ಮಾಡದೆ ಸಲ್ಲಿಸುವಂತೆ ತಿಳಿಸಿದೆ. ಒಂದು ವೇಳೆ ದಾಖಲೆ ಸಲ್ಲಿಸದಿದ್ದಲ್ಲಿ ಪ್ರಾಧಿಕಾರದಿಂದ ಪ್ರಸ್ತಾವನೆ/ವರದಿ ಸಲ್ಲಿಸಲಾಗಿಲ್ಲವೆಂದು ಸರ್ಕಾರಕ್ಕೆ ವರದಿ ನೀಡುವುದಾಗಿ ಎಚ್ಚರಿಸಿದೆ.
ಹಲವಾರು ಅಕ್ರಮಗಳನ್ನ ಮರೆಮಾಚಿರುವ ಮೈಸೂರು ಅಭಿವೃದ್ದಿ ಪ್ರಾಧಿಕಾರ ಇದೀಗ ಭ್ರಷ್ಟ ಅಧಿಕಾರಿಯ ಅಕ್ರಮವನ್ನೂ ಮುಚ್ಚಿಡುವ ಹುನ್ನಾರ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ. ಈಗಾಗಲೇ ಸಾರ್ವಜನಿಕರ ಟೀಕೆಗೆ ಗುರಿಯಾದ ಪ್ರಾಧಿಕಾರ ಭ್ರಷ್ಟರ ಪರ ಬ್ಯಾಟ್ ಬೀಸುವುದನ್ನ ನಿಲ್ಲಿಸಬೇಕಿದೆ. ಸದ್ಯ ಜಿಲ್ಲಾಕಾರಿಗಳೇ ಎಂಡಿಎ ಅಧ್ಯಕ್ಷರು. ಅಕ್ರಮ ಎಸಗಿರುವ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳೇ ಆಸಕ್ತಿ ತೋರದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಜಿಲ್ಲಾಧಿಕಾರಿಗಳಾದ್ರೂ ಇತ್ತ ಗಮನ ಹರಿಸುವರೇ…?.

