ಮಂಗಳೂರು : ರಾಜ್ಯಪಾಲರ ಭಾಷಣ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ವರದಿ ನೀಡಲು ಮುಂದಾಗಿರುವ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಬಿಜೆಪಿಯ ಮಾರ್ಗದರ್ಶನದಂತೆ ನಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳಿವೆಯೋ ಅಲ್ಲಿ ರಾಜ್ಯಪಾಲರ ಮೂಲಕ ತೊಂದರೆ ಕೊಡುವ ಕೆಲಸ ನಡೆಯುತ್ತಿದೆ.
ಇದು ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ಧಿಕ್ಕರಿಸುವ ನಡವಳಿಕೆಯಾಗಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ,ರಾಜ್ಯಪಾಲರು ಅವರ ಕೆಲಸ ಕಾರ್ಯಗಳನ್ನ ಮಾಡುತ್ತಾರೆ ಅದರ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ ಅವರಿಗೆ ಎಲ್ಲಾ ರೀತಿಯ ಹಕ್ಕು ಇದೆ ಎಂದು ಹೇಳಿದರು.
ರಾಜ್ಯಪಾಲರು ನಮ್ಮ ಸರ್ಕಾರದ ಪ್ರತಿನಿಧಿ. ಅವರ ಭಾಷಣ ಎಂದರೆ ಅದು ಸರ್ಕಾರದ ಭಾಷಣವೇ ಹೊರತು ಅವರ ವೈಯಕ್ತಿಕ ಅಭಿಪ್ರಾಯವಲ್ಲ. ಸರ್ಕಾರದ ಉದ್ದೇಶ ಮತ್ತು ಸಾಧನೆಗಳನ್ನು ಹೇಳುವುದು ಅವರ ಜವಾಬ್ದಾರಿ. ರಾಜ್ಯಪಾಲರು ಅವರಿಗೆ ಏನು ಬೇಕೋ ಅದನ್ನ ಹೇಳೋದಲ್ಲ ಎಂದು ತಿರುಗೇಟು ನೀಡಿದರು.

