ಮಂಗಳೂರು: ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆ 2025 (LABOUR CODE) ಜಾರಿಗೆ ತಂದಿರುವ ಕೇಂದ್ರ ಸರಕಾರದ ವಿರುದ್ಧ ಇಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಅಖಿಲ ಭಾರತ ಮಹಾ ಮುಷ್ಕರ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ತಮ್ಮ ಕೆಲಸದಲ್ಲಿ ತೊಡಗದೆ ಮುಷ್ಕರದಲ್ಲಿ ಭಾಗವಹಿಸಿದರು.

ಸದಾ ಚಟುವಟಿಕೆಯಿಂದ ಜಿನುಗುನುಗುತ್ತಿದ್ದ ಮಾರುಕಟ್ಟೆ ಕಾರ್ಮಿಕರಿಲ್ಲದೆ ಬಿಕೋ ಎನ್ನುತ್ತಿತ್ತು, ಕಾರ್ಮಿಕರಿಲ್ಲದೆ ವ್ಯಾಪಾರ ಮಾಡಲು ಸಾಧ್ಯವಾಗದೆ ಬಹುತೇಕ ವರ್ತಕರೇ ಅಂಗಡಿ ಮತ್ತು ಗೋದಾಮುಗಳನ್ನು ತೆರೆಯಲಿಲ್ಲ, ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಓಡಾಟವೂ ವಿರಳವಾಗಿತ್ತು. ಬಂದರು ಶ್ರಮಿಕರ ಸಂಘವು ಮುಷ್ಕರಕ್ಕೆ ಬೆಂಬಲ ನೀಡಿ ಮುಷ್ಕರದಲ್ಲಿ ಭಾಗವಹಿಸುವಂತೆ ಕಾರ್ಮಿಕರ ಸಭೆಯನ್ನು ನಡೆಸಿ ಮುಷ್ಕರ ಯಶಸ್ವಿಯಾಗುವಂತೆ ವ್ಯಾಪಕ ಸಿದ್ಧತೆ ನಡೆಸಿತ್ತು.

ಅಖಿಲ ಭಾರತ ಕಾರ್ಮಿಕರ ಮುಷ್ಕರದ ಕರೆಗೆ ಹಳೆ ಬಂದರಿನ ಹಮಾಲಿ ಕಾರ್ಮಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಾಲಕನಿಗೆ ಟನ್ನುಗಟ್ಟಲೆ ಸಾಮಗ್ರಿ ಖರೀದಿಸುವ ಸಾಮರ್ಥ್ಯ ಇದ್ದರೂ ಕಾರ್ಮಿಕನಿಲ್ಲದೆ ಒಂದು ಮೂಟೆಯೂ ಅಲುಗಾಡಿಸಲು ಸಾಧ್ಯವಿಲ್ಲ, ಎಂಬುದಕ್ಕೆ ಮಹಾ ಮುಷ್ಕರ ಸಾಕ್ಷಿಯಾಗಿದೆ. ಬಿಜೆಪಿಯ ಭದ್ರ ನೆಲೆಗಳಲ್ಲೇ ಕಾರ್ಮಿಕರು ಮೋದಿ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.