ಚಡಚಣ : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾಡುತಿದ್ದ ಸಾಗಣೆ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 52ರ ಹಳಗುಣಕಿ ಕ್ರಾಸ್‌ನಲ್ಲಿ ಸಾರ್ವಜನಿಕರು ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಆಹಾರ ಇಲಾಖೆಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿ ಸಿದ್ರಾಮೇಶ ಹಲಸಂಗಿ ಭೇಟಿ ನೀಡಿ ವಾಹನ ವಶಕ್ಕೆ ಪಡೆದರು.

ಪಡಿತರ ಅಕ್ರಮ ಸಾಗಣೆ ಚಿತ್ರದುರ್ಗದಿಂದ ಗುಜರಾತ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ವಾಹನದಲ್ಲಿದ್ದ 570 ಚೀಲಗಳಲ್ಲಿನ 29,640 ಕೆಜಿ ಅಕ್ಕಿ ಸಮೇತ ವಾಹನವನ್ನು ಜಪ್ತಿ ಮಾಡಿ, ಚಾಲಕನನ್ನು ಬಂಧಿಸಲಾಗಿದೆ.

ಈ ಕುರಿತು ದೂರು ದಾಖಲಿಸಿ, ವಾಹನವನ್ನು ಹೊರ್ತಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ಸಿದ್ರಾಮೇಶ ಹಲಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.