ವಿಜಯಪುರ: ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಇತ್ತೀಚೆಗೆ ಕ್ಯಾಂಟರ್ ಅಡ್ಡಗಟ್ಟಿ ಹಣ ದರೋಡೆ ಮಾಡಿದ್ದ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾಂತೇಶ್ ತಳವಾರ, ಧರೇಶ್ ದಳವಾಯಿ, ಶಿವಪ್ಪ ಮಾಶ್ಯಾಳ, ಸುನೀಲ್ ವಡ್ಡರ, ಶಿವಾನಂದ್ ದಳವಾಯಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಶನಿವಾರ (ಮೇ 18) ಕೊಲ್ಹಾರದ ಹೊರವಲಯದಲ್ಲಿ ಕ್ಯಾಂಟರ್ ವಾಹನ ತಡೆದು, ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ನಡೆಸಿ 32 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದರು.
ತನಿಖೆ ವೇಳೆ ದರೋಡೆಯಲ್ಲಿ ವಾಹನ ಚಾಲಕನ ಪಾತ್ರ ಇರುವುದು ಬೆಳಕಿಗೆ ಬಂದಿದೆ.
ಮೇ 18ರಂದು ಜೀವರ್ಗಿಯ ಹತ್ತಿ ವ್ಯಾಪಾರಿ ಚಂದ್ರಕಾಂತ್ ಕುಂಬಾರ ಎಂಬವರಿಗೆ ಸೇರಿದ ಹತ್ತಿಯನ್ನು ಧಾರವಾಡದಲ್ಲಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದರೋಡೆ ನಡೆದಿತ್ತು. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಚಾಲಕನನ್ನು ವಿಚಾರಣೆ ನಡೆಸಿದಾಗ ದರೋಡೆಯ ಹಿಂದಿನ ಸಂಚು ಬಯಲಾಗಿದೆ.
ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ 31,04,364 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.