ಉಡುಪಿ: ಸಮುದ್ರದಿಂದಾಗಿ ಕರಾವಳಿ ಪ್ರದೇಶದ ವಾತಾವರಣದಲ್ಲಿ ತೇವಾಂಶ (ಹ್ಯುಮಿಡಿಟಿ) ಹೆಚ್ಚು ಇರುತ್ತದೆ. ಆದುದರಿಂದ ಇಲ್ಲಿನ ವಾತಾವರಣಕ್ಕೆ ಏರ್ ಕೂಲರ್‌ಗಿಂತ ಏರ್ ಕಂಡೀಷನರ್ ಅತೀ ಸೂಕ್ತವಾಗಿದೆ ಎಂದು ಮೋಲ್ಟೋಕೇರ್ ಪ್ರಾಪರ್ಟಿ ಸರ್ವೀಸ್‌ನ ನಿರ್ದೇಶಕ ಕೃಷ್ಣರಾಜ ತಂತ್ರಿ ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬ್ರಹ್ಮಗಿರಿಯ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಏರ್ ಕಂಡೀಷನರ್ ಕಾರ್ಯನಿರ್ವಹಣೆ: ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾತಾವರಣದಲ್ಲಿ ಸಾಮಾನ್ಯವಾಗಿ ಶೇ.40-60ರಷ್ಟು ತೇವಾಂಶ ಇರಬೇಕು. ಶೇ.60ಕ್ಕಿಂತ ಜಾಸ್ತಿ ಇದ್ದರೆ ದೇಹದಲ್ಲಿ ಹೆಚ್ಚು ಬೆವರು ಬರುತ್ತದೆ. ಶೇ.40ಕ್ಕಿಂತ ಕಡಿಮೆ ಇದ್ದರೆ ದೇಹ ಒಣಗಿ ಹೋಗುತ್ತದೆ. ಕರಾವಳಿಯಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಬೆವರು ಹೆಚ್ಚಾಗಿರುತ್ತದೆ. ಏರ್ ಕಂಡೀಷನರ್ ಕೋಣೆಯಲ್ಲಿರುವ ತೇವಾಂಶವನ್ನು ಹೊರಗೆ ಹಾಕಿ ಒಳಗೆ ತಂಪಿನ ವಾತಾವರಣ ಸೃಷ್ಟಿಸುತ್ತದೆ. ಕೂಲರ್ ಹೊರಗಡೆ ಗಾಳಿಯಲ್ಲಿರುವ ತೇವಾಂಶವನ್ನು ಒಳಗೆ ತರುತ್ತದೆ. ಆದುದರಿಂದ ತೇವಾಂಶ ಜಾಸ್ತಿ ಇರುವ ಕರಾವಳಿಗೆ ಏರ್ ಕಂಡೀಷನರ್ ಹೆಚ್ಚು ಸೂಕ್ತವಾಗಿದೆ ಎಂದರು.

ಏಸಿ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ:
ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ. ಇದರಲ್ಲಿ ಇರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯುವುದಿಲ್ಲ ಎಂದರು. ಏಸಿಯು ಕೋಣೆಯಲ್ಲಿರುವ ಗಾಳಿಯನ್ನು ಶುದ್ಧಗೊಳಿಸಿ ತಂಪು ಮಾಡುತ್ತದೆ. ಹೊರತು ಹೊರಗಿನ ಗಾಳಿಯನ್ನು ಒಳಗಡೆ ತೆಗೆದುಕೊಳ್ಳುವುದಿಲ್ಲ. ಏಸಿಯ ಇಂಡೋರ್ ಮತ್ತು ಔಟ್ಡೋರ್ ಯುನಿಟ್‌ಗಳಿಗೆ 10 ಅಡಿಗಳ ಅಂತರ ಅಗತ್ಯ ಇರಬೇಕು. ಇಲ್ಲದಿದ್ದರೆ ಅದು ಹೆಚ್ಚು ಕೂಲ್ ಆಗುವುದಿಲ್ಲ.

ಇಂದು ವಾತಾವರಣದಲ್ಲಿ ಉಷ್ಣಾಂಶದ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಮನೆ, ಕಚೇರಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಏರ್ ಕಂಡೀಷನರ್ ಅಳವಡಿಕೆ, ಬಳಕೆ ಹೆಚ್ಚುತ್ತಿದೆ. ಏಸಿ ಆರೋಗ್ಯ ಚೆನ್ನಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಏರ್ ಕಂಡೀಷನರ್ ವ್ಯವಸ್ಥೆಯ ಸಮರ್ಪಕ ಬಳಕೆ, ಸೂಕ್ತ ನಿರ್ವಹಣೆ ಮಾಡದಿದ್ದರೆ ವಿದ್ಯುತ್ ವೆಚ್ಚ ಹೆಚ್ಚಳದ ಜೊತೆಗೆ ಏಸಿ ಕಾರ್ಯಕ್ಷಮತೆ ಕುಸಿದು, ಅವಸರದ ದುರಸ್ತಿ ವೆಚ್ಚಗಳು ಹೆಚ್ಚಲಿವೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು. ಮೋಲ್ಟೋಕೇರ್ ಸಂಸ್ಥೆಯ ಪ್ರಶಾಂತ್, ಗಣೇಶ್, ಶರತ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಮಿತಾ ಸಹಕರಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಕರ್ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.