ಎಚ್.ಡಿ.ಕೋಟೆ: ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ಯುವಕನ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರು ಕೆಲ ಕಾಲ ಪ್ರತಿಭಟನೆ ನಡೆಸಿ ಅಸ್ಪತ್ರೆ ಆವರಣಕ್ಕೆ ನುಗ್ಗಿ ಆಸ್ಪತ್ರೆ ಕಟ್ಟದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಟ್ಟಣದ ಮುಸ್ಲಿಂ ಬ್ಲಾಕ್ನ ನಿವಾಸಿ ಟೈಲರ್ ರಮೇಶ್ ಮತ್ತು ಹೇಮಾ ದಂಪತಿಯ ಮಗ ಇವಾನ್ ವಿಲ್ (21) ವರ್ಷ ಮೃತ ದುರ್ದೈವಿ.
ಮೃತ ಇವಾನ್ ವಿಲ್ ಪೋಷಕರು ಕಳೆದ ಎರಡು ದಿನದ ಹಿಂದೆ ಮಗನಿಗೆ ಹುಷಾರಿಲ್ಲ ಎಂದು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ, ಇಲ್ಲಿನ ವೈದ್ಯರು ಪರೀಕ್ಷೆ ನಡೆಸಿ ನಿಮ್ಮ ಮಗನಿಗೆ ಹೆಚ್ಚಿನ ಪರೀಕ್ಷೆಯಾಗಬೇಕಿದೆ ಮೈಸೂರಿಗೆ ಹೋಗಿ ಈ ಪರೀಕ್ಷೆಗಳನ್ನು ಮಾಡಿಕೊಂಡು ಬನ್ನಿ ಎಂದು ಕಳಿಸಿದ್ದಾರೆ.
ಅದರಂತೆ ಇವಾನ್ ಮತ್ತು ಪೋಷಕರು ಮೈಸೂರಿನ ಪ್ರಯೋಗಲಯಕ್ಕೆ ತೆರಳಿ ಹೊಟ್ಟೆ ಭಾಗದಲ್ಲಿ ಎಕ್ಸರೇ ಮಾಡಿಕೊಂಡು ಬಂದು ಇಲ್ಲಿನ ವೈದ್ಯರಿಗೆ ನೀಡಿದಾಗ ವೈದ್ಯರು ಪರಿಶೀಲಿಸಿ ನಿಮ್ಮ ಮಗನಿಗೆ ಸ್ವಲ್ಪ ಪ್ರಮಾಣದಲ್ಲಿ ಅಲ್ಸರ್ (ಕರುಳು ಬೇನೆ) ಕಾಣಿಸಿಕೊಂಡಿದೆ ನಾವೇ ಸಣ್ಣ ಚಿಕಿತ್ಸೆ ಮಾಡಿ ಗುಣಪಡಿಸುತ್ತೇವೆ ಎಂದು ಹಣ ಕಟ್ಟಿಸಿಕೊಂಡು ಆಪರೇಷನ್ ಮಾಡಿದ್ದಾರೆ.
ಆಪರೇಷನ್ ಕರೆದುಕೊಂಡು ಹೋದ ಇವಾನ್ನನ್ನು 4 ಗಂಟೆಯಾದರೂ ಕರೆತರಲಿಲ್ಲವಲ್ಲ ಎಂದು ಪೋಷಕರು ಗಾಬರಿಗೊಂಡು ವೈದ್ಯರಲ್ಲಿ ಕೇಳಿದಾಗ ನಿಮ್ಮ ಮಗನಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು ಆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಾರೆ, ಆಸ್ಪತ್ರೆ ಸಿಬ್ಬಂದಿಯ ಮಾತಿನಿಂದ ಗಾಬರಿಯಾದ ಪೋಷಕರು ಮಗನಿಗೆ ಏನಾಯಿತೋ ಎಂದು ಹೆದರಿದ್ದಾರೆ.
ಆದರೆ ಅದಾಗಲೇ ಆಸ್ಪತೆಯ ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಇವಾನ್ ವೀಲ್ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ತಮ್ಮ ತಪ್ಪಿನಿಂದ ಆದ ಶಸ್ತ್ರಚಿಕಿತ್ಸೆಯಿಂದ ಯುವಕ ಸಾವನ್ನಪ್ಪುವ ಸಾಧ್ಯತೆ ತಿಳಿದ ಇಲ್ಲಿನ ಮೂವರು ವೈದ್ಯರು ಪೋಷಕರಿಗೆ ತಿಳಿಯದಂತೆ ಯುವಕನನ್ನು ಮೈಸೂರಿಗೆ ಕರೆದೊಯ್ದರೂ ಅದರೂ ಯುವಕ ಬದುಕಿ ಬರಲಿಲ್ಲ, ವೈದ್ಯರು ಮಾಡಿದ ತಪ್ಪಿಗೆ ಬಡ ಕುಟುಂಬ ಯುವಕ ಇವಾನ್ ವೀಲ್ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು, ಸ್ನೇಹಿತರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಆಸ್ಪತ್ರೆ ಕಟ್ಟಡಕ್ಕೆ ಆಳವಡಿಸಿರುವ ಗ್ಲಾಸ್ಗಳ ಮೇಲೂ ಕಲ್ಲು ತೂರಿ ಸಿಟ್ಟು ಹೊರ ಹಾಕಿದರು.
ಆತನಿಗೆ ಆಪರೇಷನ್ ಮಾಡುತ್ತಿದ್ದಂತೆ ಕಾರ್ಡಿಯೋ ಆರೆಸ್ಟ್ ( ಹೃದಯ ಸ್ತಂಭನ) ಆಯಿತು, ಅದರಲ್ಲೂ ಎರಡು ಬಾರಿ ಆಯ್ತು, ಯುವಕ ಇವಾನ್ ವೀಲ್ ಪ್ರಾಣ ಉಳಿಸಲು ನಮ್ಮ ಆಸ್ಪತ್ರೆಯ ಮೂವರು ವೈದ್ಯರು ಶ್ರಮಿಸಿದ್ದೇವೆ, ನಾವೇ ಖುದ್ದು ಮೈಸೂರಿಗೆ ಕರೆದುಕೊಂಡು ಹೋದೆವು ಅದರೆ ಮೈಸೂರು ತಲುಪುವಷ್ಟರಲ್ಲಿ ಇವಾನ್ ವೀಲ್ ಸಾವನ್ನಪ್ಪಿದರು ಎಂದು ಇಲ್ಲಿನ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.