ಮೈಸೂರು: ಈ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ರಾಜ್ಯದ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ ಮತ್ತು ಅಂತ್ಯೋದಯ ಪಡಿತರದಾರರಿಗೆ 35 ಕೆ.ಜಿ ಅಕ್ಕಿಯನ್ನು ಪಡಿತರ ಮೂಲಕ ಉಚಿತವಾಗಿ ವಿತರಿಸುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಸತ್ಯ ಮರೆಮಾಚುತ್ತಿದ್ದು ಬಡವರ ಅನ್ನದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು ಟೀಕಿಸಿದ್ದಾರೆ.
ಅಧಿಕಾರ ಕ್ಕೇರುವ ಸ್ವಾರ್ಥದಿಂದ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ಜನತೆಗೆ ಮೋಸ ಎಸಗಿದ್ದು ಇದೀಗ ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ವಿಫಲ ಯತ್ನಕ್ಕೆ ಮುಂದಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ವಾಗ್ದಾನದಂತೆ 15 ಕೆ.ಜಿ. ಅಕ್ಕಿ ಕೊಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಅನ್ನ ಯೋಜನೆಯ ಅಕ್ಕಿಯನ್ನು ಸ್ವಂತ ಸಿದ್ದ ರಾಮಯ್ಯ ನವರ ಅನ್ನಭಾಗ್ಯ ಯೋಜನೆ ಎಂಬಂತೆ ಬಿಂಬಿಸಿ ಸಿದ್ದರಾಮಯ್ಯ ಪ್ರಚಾರ ಪಡೆದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ 90 ಕೋಟಿಗೂ ಹೆಚ್ಚು ಬಡವರಿಗೆ ಅನ್ನ ಯೋಜನೆ ಮೂಲಕ ಕೇಂದ್ರ ಸರ್ಕಾರ ಉಚಿತ ಅಕ್ಕಿ ವಿತರಿಸಿದೆ ಎಂದರು.
ಚುನಾವಣಾ ಪ್ರಚಾರದ ಸಂದರ್ಭ ಎಲ್ಲರಿಗೂ 200 ಯುನಿಟ್ ಕೊಡುವುದಾಗಿ ಹೇಳಿದ್ದ ಸರ್ಕಾರ ಉಲ್ಟಾ ಹೊಡೆದಿದೆ ,ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ರೀತಿ ದಿನಕ್ಕೋಂದು ಹೇಳಿಕೆ ಕೊಡುವ ಹಾಗೆ 1 ವರ್ಷದ ಸರಾಸರಿ ಬಳಕೆ ಎಂಬ ಷರತ್ತು ಹಾಕಿ ವಿದ್ಯುತ್ ದರ ಏರಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡು ಪ್ರಾರಂಭವಾಗದ ಕಾಮಗಾರಿಗಳ ಸಹಿತ ತಡೆಯಿಡಿಯುವುದು ಹಲವು ಕಾಯ್ದೆ ಗಳು,ಪಠ್ಯ ಪುಸ್ತಕ ಬದಲಾವಣೆ ಹಾಗೂ ಕೆಲವು ನಿರ್ಣಯಗಳನ್ನು ತಡೆ ಹಿಡಿಯುವುದು ಸರ್ಕಾರಕ್ಕೆ ಸಾಧ್ಯವಾದರೆ, ವಿದ್ಯುತ್ ದರ ಏರಿಕೆ ತಡೆಯಲು ಸಾಧ್ಯವಿಲ್ಲ ಏಕೆ ತಿಳಿಸಬೇಕು. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಕರ್ನಾಟಕ ದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.