ಸರಗೂರು: ಮದ್ಯಸೇವಿಸಿ ಕಾರು ಚಾಲಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಕಬಿನಿ ಬಲದಂಡೆ ನಾಲೆಗೆ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ವಕೀಲರು ನೀರಿನಲ್ಲಿ ನಾಪತ್ತೆಯಾದರೆ, ಇನ್ನೊಬ್ಬ ವಕೀಲ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸಾಗರೆ ಸಮೀಪದ ಬೆಟ್ಟಯ್ಯನ ಸೇತುವೆ ಬಳಿ ಶುಕ್ರವಾರ ಸಂಜೆ ನಡೆದಿದ್ದು, ಹುಣಸೂರು ತಾಲ್ಲೂಕಿನ ಹುಂಡವಾಡಿ ಗ್ರಾಮದ ಸಿ.ದಿನೇಶ್(50), ನಿಲುವಾಗಿಲು ಗ್ರಾಮದ ಗಿರೀಶ್(40) ನೀರಿನಲ್ಲಿ ನಾಪತ್ತೆಯಾದರೆ, ಕಟ್ಟೆಮಳಲವಾಡಿಯ ಅಶೋಕ ಎಂಬುವರು ಹಗ್ಗದ ಸಹಾಯದಿಂದ ನಾಲೆಯಿಂದ ಮೇಲೆ ಬಂದಿದ್ದಾರೆ.
ವಕೀಲ ವೃತ್ತಿಯಲ್ಲಿದ್ದ ಮೂವರು ಸ್ಯಾಂಟ್ರೋ (ಕೆ.ಎ.೦೯ ಪಿ 8823) ಕಾರಿನಲ್ಲಿ ಅತಿ ವೇಗವಾಗಿ ಚಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಸಾಗರೆ ಸಮೀಪದ ಬೆಟ್ಟಯ್ಯನ ಸೇತುವೆ ಬಳಿ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ನೇರವಾಗಿ ನಾಲೆಗೆ ಬಿದ್ದಿದೆ.
ಈ ವೇಳೆ ಕಾರಿನಲ್ಲಿದ್ದ ಅಶೋಕ ಎಂಬುವರು ಸಾರ್ವಜನಿಕರು ನೀಡಿದ ಹಗ್ಗದ ಸಹಾಯದಿಂದ ಮೇಲೆ ಬಂದಿದ್ದಾರೆ. ಇನ್ನುಳಿದ ಇಬ್ಬರು ವಕೀಲರು ಕುಡಿದ ಮತ್ತಿನಲ್ಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರಗೂರು ಪೊಲೀಸರು ಅಶೋಕ ಅವರನ್ನು ಹತ್ತಿರದ ವಿವೇಕಾನಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲೆಯಲ್ಲಿ ಬಿದ್ದ ಕಾರನ್ನು ಹೊರತೆಗೆಯಲಾಗಿದೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.