ಬೀದರ್: ಕರ್ನಾಟಕದ ಮೂಲಕ ಅಕ್ರಮವಾಗಿ ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದ ಗಾಂಜಾವನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಬೀದರ್ ಹಾಗೂ ಎನ್ಸಿಬಿ ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಸುಮಾರು 15.50 ಕೋಟಿ ಮೌಲ್ಯದ ಅಪಾರ ಪ್ರಮಾಣದ ಗಾಂಜಾ ಸೀಜ್ ಮಾಡಲಾಗಿದೆ. ಬೀದರ್ ಜಿಲ್ಲೆ ಔರಾದ್ ತಾಲೂಕಿನ ವನಮಾರಪಳ್ಳಿ ಚೆಕ್ಪೋಸ್ಟ್ ಬಳಿ ಗಾಂಜಾ ಜಪ್ತಿಯಾಗಿದ್ದು ಒಟ್ಟು 1596 ಕೆಜಿ ಗಾಂಜಾವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಆಂಧ್ರಪ್ರದೇಶದಿಂದ ಮಹಾರಾಷ್ಟ್ರಕ್ಕೆ ತೆರಳುವಾಗ ಔರಾದ್ನ ವನಮಾರಪಳ್ಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಲಾಗಿದ್ದು, ತಪಾಸಣೆ ವೇಳೆ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಹುಮನಾಬಾದ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ನಾರ್ಕೊಟಿಕ್ ಕ್ರೈಮ್ ಬ್ಯುರೊ (NCB) ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಹಿಂದೆಯೂ ಅಕ್ರಮ ಗಾಂಜಾ ಸಾಗಾಟ ಪ್ರಕರಣದಲ್ಲಿ ಇದೇ ಆರೋಪಿಗಳು ಬಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.