ಮೈಸೂರು: ಸಂಸತ್ ಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮೈಸೂರಿನ ಮನೋರಂಜನ್ ನೀಡುತ್ತಿರುವ ಹೇಳಿಕೆಗೂ ಆತನ ಪೋಷಕರು ನೀಡುತ್ತಿರುವ ಹೇಳಿಕೆಗೆ ತಾಳೆಯಾಗದಿರುವುದರಿಂದಾಗಿ ದೆಹಲಿ ವಿಶೇಷ ತನಿಖಾ ತಂಡದ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಮನೋರಂಜನ್ ಮನೆಗೆ ತೆರಳಿದ ತನಿಖಾ ತಂಡ ಆತನ ತಾಯಿ ಮತ್ತು ಸಹೋದರಿಯನ್ನು ಸತತ ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ಈಗಾಗಲೇ ಪೊಲೀಸರ ವಶದಲ್ಲಿರುವ ಮನೋರಂಜನ್ ನೀಡಿರುವ ಹೇಳಿಕೆ ಮತ್ತು ಆತನ ಪೋಷಕರು ನೀಡುತ್ತಿರುವ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಮನೋರಂಜನ್ ತಾಯಿ ಮತ್ತು ಆತನ ಸಹೋದರಿ ನೀಡಿರುವ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು.
ಪ್ರಕರಣದ ಮತ್ತೊಬ್ಬ ಆರೋಪಿ ಸಾಗರ್ ಶರ್ಮ ಎರಡು ಬಾರಿ ಮನೋರಂಜನ ನಿವಾಸಕ್ಕೆ ಬಂದಿರುವ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಮನೋರಂಜನ್, ಸಾಗರ್ ಶರ್ಮ ಮೈಸೂರಿಗೆ ಬಂದೇ ಇಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಜತೆಗೆ ಮನೋರಂಜನ್ಗೆ ಯಾರು ಆರ್ಥಿಕ ಸಹಾಯ ಮಾಡುತ್ತಿದ್ದರು ಎಂಬ ಬಗ್ಗೆಯೂ ದೆಹಲಿ ಪೊಲೀಸರಿಗೆ ಸರಿಯಾದ ಮಾಹಿತಿಗಳು ಲಭವಾಗಿಲ್ಲ. ಹೀಗಾಗಿ ಬ್ಯಾಂಕ್ ಸ್ಟೇಂಟ್ ಮೆಂಟ್ ಪರಿಶೀಲನೆಗೆ ತನಿಖಾ ತಂಡ ಮುಂದಾಗಿದೆ.
ವಿಚಾರಣೆ ವೇಳೆ ಆರೋಪಿ ಮನೋರಂಜನ್ ತಾಯಿ, ನಮ್ಮ ಮಗ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಊಟ, ತಿಂಡಿ ನಿತ್ಯಕರ್ಮಗಳಿಗೆ ಮಾತ್ರ ಮನೆ ಒಳಗೆ ಬರುತ್ತಿದ್ದ. ಬೆಳಗ್ಗೆ ಎದ್ದು ಹೊರಗೆ ಪಾರ್ಕ್ ಸುತ್ತಿ ಬರುತ್ತಿದ್ದ. ಸ್ನಾನ, ತಿಂಡಿ ಮುಗಿಸಿ ಆತನ ಕೋಣೆ ಸೇರಿದರೆ ಮತ್ತೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ. ಮತ್ತೆ ಊಟ ಮುಗಿಸಿ ಮೇಲಿನ ಕೋಣೆ ಸೇರುತ್ತಿದ್ದ. ರಾತ್ರಿ ಊಟಕ್ಕೆ ಕೆಳಗೆ ಬಂದು ಹೋಗುತ್ತಿದ್ದ. ಒಟ್ಟಾರೆ ಆತ ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ. ಮುದ್ದಿನಿಂದ ಬೆಳಸಿದ್ದು ಇದಕ್ಕೆ ಕಾರಣವಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.