ಮೈಸೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರಕಾರದಿಂದ ಐದು ರೂ. ಹೆಚ್ಚುವರಿಯಾಗಿ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಮೈಸೂರಿನಲ್ಲಿ ಶನಿವಾರ ಸಹಕಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಾಲು ಉತ್ಪಾದಕರಿಂದ ಖರೀದಿಸಿದ ಹಾಲಿಗೆ ಹಣ ನೀಡುವುದರೊಂದಿಗೆ ಸರಕಾರ ಹೆಚ್ಚುವರಿಯಾಗಿ 5ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆದರೂ ರೈತರಿಗೆ ಹೈನುಗಾರಿಕೆ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮತ್ತೆ ಪ್ರತಿ ಲೀಟರ್ ಹಾಲಿಗೆ 5 ರೂ. ನೀಡುವ ಬಗ್ಗೆ ಯೋಜನೆ ಇದ್ದು, ಈ ಬಗ್ಗೆ ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರು ಗಾಬರಿಯಾಗುತ್ತಾರೆ. ದರ ಏರಿಕೆ ಎಂದರೆ ಎರಡು ರೀತಿ ಇದೆ. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡೋದು ಮತ್ತೊಂದು ಖರೀದಿ ಮಾಡುವವರಿಗೆ ದರ ಹೆಚ್ಚು ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಈ ಎರಡು ದರಗಳು ಕಡಿಮೆ ಇದೆ. ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಯಾರಿಗೂ ಹೊರೆ ಆಗದಂತೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಅಮುಲ್ನೊಂದಿಗೆ ಕೆಎಂಎಫ್ಅನ್ನು ವಿಲೀನ ಮಾಡುವ ಪ್ರಶ್ನೆಯೇ ಇಲ್ಲ, ಅಮೂಲ್ ಪ್ರತ್ಯೇಕವಾದ ಸಂಸ್ಥೆ. ಅದೇ ರೀತಿ ಕೆಎಂಎಫ್ ಪ್ರತ್ಯೇಕವಾದ ಸಂಸ್ಥೆ ಎಂದು ಹೇಳಿದರು.