ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿನ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕಾಣಿಸಿಕೊಂಡಿರುವ ಅಗ್ನಿ ಅನಾಹುತಕ್ಕೆ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ.
ಇತಿಹಾಸ ಪ್ರಸಿದ್ಧ ಅಂದಾಜು 3,200 ಮೆಟ್ಟಿಲಿರುವ ಬೆಟ್ಟದ ಮೇಲೆ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಹಲವು ದೇವರ ಪುರಾತನ ದೇವಾಲಯಗಳಿದ್ದು ದೀಪಾವಳಿ ಸೇರಿದಂತೆ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ನಡೆಯುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ವೇಳೆ ರಾಜ್ಯದ ಮೂಲೆಗಳಿಂದ ಲಕ್ಷಾಂತರ ಭಕ್ತರು ಬೆಟ್ಟ ಏರಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ. ಆದರೆ ಬೆಟ್ಟಕ್ಕೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ಬೇಸರದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದ ರೈತರು ದನ ಕರುಗಳ ಮೇವಿಗಾಗಿ ಹಸಿರು ಹುಲ್ಲು ಪಡೆಯುವುದು ಹಾಗೂ ಗಿಡ ಮರ ಪೊದೆಗಳ ಬಳಿ ಚಿರತೆ ಸೇರಿದಂತೆ ಕಾಡು ಪ್ರಾಣಿ ಹಾವಳಿ ತಪ್ಪಿಸುವ ಉದ್ದೇಶದಿಂದ ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನಡುವೆ ಆರ್ಎಫ್ಒ ಕಿರಣ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದರೂ ಈಗಾಗಲೇ ನೂರಾರು ಎಕರೆ ಅರಣ್ಯ ನಾಶವಾಗಿದೆ.
ಬೆಟ್ಟದ ಸುತ್ತಲೂ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪರಿಸರ ನಾಶವಾಗುತ್ತಿದ್ದ ಬೆನ್ನಲ್ಲೇ ಇದನ್ನು ಗಮನಿಸಿ ಬೆಟ್ಟದಪುರ ಡಿಟಿಎಂಎನ್ ವಿದ್ಯಾ ಸಂಸ್ಥೆಯ ಕೆಲ ಶಿಕ್ಷಕರು ಬೆಟ್ಟ ಏರಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರಾದರು ಪೂರ್ಣ ಪ್ರಮಾಣದ ಬೆಂಕಿ ಆರಿಸುವಲ್ಲಿ ಸಫಲವಾಗಿಲ್ಲ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಜರೀನಾ ಖಾನಮ್ ಹೇಳಿದ್ದಾರೆ.
ಇನ್ನೊಂದೆಡೆ ಪ್ರಾಚೀನ ಮತ್ತು ಪುರಾತತ್ವ ಹಾಗೂ ಮುಜರಾಯಿ ಇಲಾಖೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಅಭಿವೃದ್ಧಿಗೆ ಒತ್ತು ನೀಡಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ಬೇಸಿಗೆ ಕಾಲದಲ್ಲಿ ಹರಡುವ ಕಾಡ್ಗಿಚ್ಚು ತಡೆಯಲು ನೂತನ ಯೋಜನೆ ರೂಪಿಸಿ ಕಳ್ಳ ಬೇಟೆ ತಡೆಯಲು ಬೆಟ್ಟದ ಸುತ್ತ ತಂತಿಬೆಲಿ ರಕ್ಷಾ ಕವಚ ನಿರ್ಮಾಣ ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ತಾಲೂಕು ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪಿ.ಟಿ ಲಕ್ಷ್ಮಿ ನಾರಾಯಣ್ ಆಗ್ರಹಿಸಿದ್ದಾರೆ.