ಮೈಸೂರು: ಆನ್ ಲೈನ್ ನಲ್ಲಿ ವಂಚಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಕರಣ ಸಂಖ್ಯೆ ಹೆಚ್ಚುತ್ತಲೇ ಇರುವುದು ಆಘಾತಕಾರಿಯಾಗಿದೆ.ಇದೀಗ ಮೈಸೂರಿನ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆನ್ಲೈನ್ ಮೂಲಕ ವಂಚನೆಗೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರ 3ನೇ ಹಂತದ ಬಿ.ಭಾರ್ಗವಿ (31) ಎಂಬುವವರಿಗೆ 9922997458 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಮುಂಬೈನಲ್ಲಿ 200 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಸೆಂಡರ್ ಡೀಟೈಲ್ಸ್ ಪರಿಶೀಲಿಸಿದಾಗ ನಿಮ್ಮ ಹೆಸರಿದೆ ಎಂದು ಬೆದರಿಸಿ, ತನಿಖೆ ಮಾಡಬೇಕೆಂದು ವಿಡಿಯೋ ಕಾಲ್ ಮಾಡಿದ್ದನು.
ಇಷ್ಟೇ ಅಲ್ಲದೆ ನಿಮ್ಮ ಆಧಾರ್ ಸಂಖ್ಯೆ ಬಳಸಿ ದೆಹಲಿ ಮತ್ತು ಬಿಹಾರ್ನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೀರಿ. ಈ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಮತ್ತೊಂದು ಆರೋಪ ಹೊರಿಸಿದ್ದರು. ಅಲ್ಲದೇ, ಆರ್ಬಿಐನಿಂದ ಫೈನಾನ್ಸಿಯಲ್ ತನಿಖೆ ಮಾಡಬೇಕು. ಅದಕ್ಕಾಗಿ 96.100ರೂ. ಪಾವತಿಸಿ. ನೀವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟರೆ ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದ ಮೇರೆಗೆ ಭಾರ್ಗವಿ 96,100 ರೂ. ವರ್ಗಾವಣೆ ಮಾಡಿ ವಂಚನೆಗೊಳಗಾಗಿದ್ದಾರೆ.
ವಿಜಯ ನಗರ 4ನೇ ಹಂತದ ಬಿ.ಹರಿಪ್ರಸಾದ್ (48) ಎಂಬುವರು ಇನ್ ಸ್ಟಾಗ್ರಾಂನಲ್ಲಿ ಹಣ ಹೂಡಿಕೆ ಸಂಬಂಧಿಸಿದ ಪೋಸ್ಟ್ ಗಳನ್ನು ನೋಡುತ್ತಿದ್ದಾಗ ಒಂದು ಪೋಸ್ಟ್ನಲ್ಲಿದ್ದ ಆರ್ ಅವರಿಗೆ ಇಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪೋಸ್ಟ್-ಮೆಸೇಜ್ ಬಾಕ್ಸ್ಗೆ ಅವರು ತಮ್ಮ-ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿದ್ದಾರೆ. ನಂತರ ಅವರನ್ನು ಸಂಪರ್ಕಿಸಿದ ವಂಚಕರು, ಪ್ರತ್ಯೇಕವಾಗಿ ವಾಟ್ಸಾಪ್ ಗ್ರೂಪ್ವೊಂದರಲ್ಲಿ ಅವರನ್ನು ಸೇರಿಸಿ ಆಕರ್ಷಕ ಆರ್ಗಳ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಮರುಳಾದ ಹರಿಪ್ರಸಾದ್, 49.93,475 ರೂ. ವರ್ಗಾವಣೆ ಮಾಡಿದ್ದಾರೆ. ಇವರ ಹೂಡಿಕೆಗೆ ದೊಡ್ಡ ಮೊತ್ತದ ಲಾಭ ಬಂದಿದೆ ಎಂದು ಗ್ರೂಪ್ನಲ್ಲಿ ತೋರಿಸಲಾಗಿದೆ. ಅದನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿ ವಿಫಲರಾಗುವ ಮೂಲಕ ವಂಚನೆಗೊಳಗಾಗಿದ್ದಾರೆ.
ಜೆಪಿ ನಗರದ ಗೃಹಿಣಿ ಸುಷ್ಮಾ ಪ್ರದೀಪ್(45) ಅವರಿಗೆ ಟೆಲಿಗ್ರಾಂ ಗ್ರೂಪ್ ಮೂಲಕ ವರ್ಕ್ ಫ್ರಂ ಹೋಂ ಲಿಂಕ್ ರವಾನಿಸಲಾಗಿದೆ. ಹಣ ಹೂಡಿಕೆ ಮಾಡಿ ಟಾಸ್ಕ್ ನಿರ್ವಹಿಸಿದರೆ ಲಾಭ ಬರಲಿದೆ ಎಂದು ನಂಬಿದ ಸುಷ್ಮಾ ಹಂತ ಹಂತವಾಗಿ 6,25,075 ರೂ. ವರ್ಗಾವಣೆ ಮಾಡಿ ವಂಚನೆಗೊಳಗಾಗಿದ್ದಾರೆ. ಈ ಮೂವರು ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.