ನಂಜನಗೂಡು: ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲೆ ಬಿಜೆಪಿ ಪಕ್ಷದ ಪೋಸ್ಟರ್ ಅಂಟಿಸಲಾಗಿದ್ದು ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯ ಗೋಡೆ ಮೇಲೆ ಬಿಜೆಪಿಯ ಭರವಸೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರ ಭಾವಚಿತ್ರವಿರುವ ಪೋಸ್ಟರ್ ಅಳವಡಿಸಿರುವುದನ್ನು ಖಂಡಿಸಿ ಯುವ ಮುಖಂಡ ಮಹೇಂದ್ರ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ್ ಪೋಸ್ಟರ್ ಗೆ ಬಣ್ಣ ಬಳಿಯುವ ಮುಖಾಂತರ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಯುವ ಕಾಂಗ್ರೆಸ್ ಮುಖಂಡ ಮಹೇಂದ್ರ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ. ಸಮವಸ್ತ್ರ ಕೊಡಲಾಗದ ಸರ್ಕಾರ. ಶಾಲೆಯ ಗೋಡೆಯ ಮೇಲೆ ಜಾಹೀರಾತು ಅಂಟಿಸಿರುವುದು ದುರಂತ.
ಬಿಜೆಪಿ ಸರ್ಕಾರ ಸರ್ಕಾರಿ ಶಾಲೆಯಲ್ಲಿಯೂ ಕೂಡ ರಾಜಕೀಯ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಮತದಾನ ನಡೆಯುತ್ತದೆ. ಶಾಲೆಯ ಗೋಡೆಗಳಲ್ಲಿ ಯಾವುದೇ ಪಕ್ಷಗಳ ಪೋಸ್ಟರುಗಳು ಹಾಗೂ ಇನ್ನಿತರ ಜಾಹೀರಾತು ಇರುವ ಪ್ರತಿಗಳನ್ನು ಅಂಟಿಸುವಂತಿಲ್ಲ ಇದು ಕಾನೂನು ಉಲ್ಲಂಘನೆಯಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪೋಸ್ಟರ್ ಗೆ ಬಣ್ಣ ಬಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.