ಮೈಸೂರು: ಬಿಜೆಪಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನೂರಕ್ಕೆ ನೂರು ಕಿರುಕುಳ ನೀಡುವ ವಾತಾವರಣ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ ಎಂಬ ಶಾಸಕ ಎಸ್.ಎ.ರಾಮದಾಸ್ ಆರೋಪಿ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. ರಾಮದಾಸ್ ಹಿರಿಯ ನಾಯಕರಾಗಿದ್ದು, ತಮ್ಮ ಸುದೀರ್ಘ ರಾಜಕಾರಣದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಅವರು ಬೇರೆಯವರಿಗೆ ಕಿರುಕುಳ ನೀಡಿಲ್ಲ ಎಂದ ಮೇಲೆ ಅವರಿಗೆ ಯಾರು ಕಿರುಕುಳ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಮಂತ್ರಿ ಹಾಗೂ ಅನುಭವ ರಾಜಕಾರಣಿಯಾಗಿರುವ ರಾಮದಾಸ್ ಅವರಿಗೆ ಯಾರು ಕೂಡ ಮನಸ್ಸು ನೋಯಿಸುವ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ. ನಾನು ಬಿಜೆಪಿಗೆ ಬಂದು ಮೂರು ವರ್ಷವಾಗಿದ್ದು,ನಾನು ಕಂಡಂತೆ ಬಿಜೆಪಿಯಲ್ಲಿ ಕಿರುಕುಳದ ವಾತಾವರಣ ಇಲ್ಲ. ರಾಮದಾಸ್ ನನಗಿಂತ ಹಳೆಯ ನಾಯಕರಾಗಿದ್ದು, ಈ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.